ಮಾನವನ ಜೀವನವು ಸತ್ಯ ಶುದ್ಧವಾಗಿರಬೇಕು. ನಿಷ್ಠೆಯಿಂದ ಕೂಡಿರಬೇಕು. ಭಗವಂತನಲ್ಲಿ ನಿಷ್ಠೆಯನ್ನು ಇಟ್ಟು ಸರಳವಾದ ಜೀವನ ಸಾಗಿಸಿದಾಗ ನಮ್ಮ ಬದುಕು ಪರಿಪೂರ್ಣವೆನಿಸುತ್ತದೆ. ನಮ್ಮ ಜೀವನವು ಸರಳ ಸುಖಮಯವಾಗಿ ಸಾಗಬೇಕಾದರೆ ಕೆಲವೊಂದಿಷ್ಟು ವಿಷಯಗಳಿಂದ ದೂರ ಇರಬೇಕಾಗುತ್ತದೆ. ಪರಸ್ತ್ರೀ, ಪರಧನಗಳೇ ಅವುಗಳಾಗಿವೆ. ವಿಷಯುಕ್ತವಾದ ಹಾವಿಗೆ ಅಂಜುವುದಿಲ್ಲ, ಉರಿಯುವ ಬೆಂಕಿಗೆ ಅಂಜುವುದಿಲ್ಲ, ಹರಿತವಾದ ಖಡ್ಗದ ತಿವಿತಕ್ಕೆ ಅಂಜುವುದಿಲ್ಲ. ಪರಸ್ತ್ರೀ, ಪರಧನ ಎಂಬ ಎರಡು ವಿಷಯಗಳಿಗೆ ಮಾತ್ರ ಅಂಜುತ್ತೇನೆ. ಪರಸ್ತ್ರೀಯ ಸಹವಾಸಕ್ಕೆ ಹೋದ ರಾವಣನು ಸರ್ವನಾಶವಾದನು. ಪರವಧುವನು ಮಹಾದೇವಿ ಎಂಬೆ ಎಂಬ ಭಾವನೆ ನಮ್ಮದಾಗಬೇಕು. ಪರಧನ ಸ್ಪರ್ಶ ಪಾಪಕ್ಕೆ ಸಮ ಎಂಬ ನಿಲುವು ನಮ್ಮದಾಗಬೇಕು ಎನ್ನುವುದು ಈ ವಚನದ ಸಾರವಾಗಿದೆ. ಇದನ್ನು ಪಾಲಿಸುವುದರಿಂದ ಹಲವು ಸಮಸ್ಯೆಗಳಿಂದ ದೂರ ಇರಬಹುದು ಎನ್ನುವುದು ಸಲಹೆಯಾಗಿದೆ.