ಬೆಳಗಾವಿ: ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಈ ಬಾರಿ ತರಕಾರಿ ಬೆಳೆಯುವ ಕ್ಷೇತ್ರ ಅರ್ಧದಷ್ಟು ಇಳಿಕೆಯಾಗಿದೆ. ಹಾಗಾಗಿ ಇಲ್ಲಿನ ಮಾರುಕಟ್ಟೆಗೆ ಬೇಡಿಕೆಯಷ್ಟು ತರಕಾರಿ ಬರುತ್ತಿಲ್ಲ. ಹಾಗಾಗಿ ಕೆಲವು ತರಕಾರಿಗಳ ದರ ಗಗನಕ್ಕೇರಿದೆ. ಇನ್ನೂ ಕೆಲ ತರಕಾರಿಗಳ ದರ ಯಥಾಸ್ಥಿತಿ ಇದೆ.
ನಾಲ್ಕೈದು ತಿಂಗಳ ಹಿಂದೆ ಟೊಮೆಟೊ ದರ ಕೆ.ಜಿಗೆ ₹100 ದಾಟಿತ್ತು. ನಂತರದ ದಿನಗಳಲ್ಲಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗಿದ್ದರಿಂದ ಕೆ.ಜಿಗೆ ₹20ರಿಂದ ₹40ಕ್ಕೆ ಇಳಿದಿತ್ತು. ಈಗಲೂ ಅಷ್ಟೇ ದರ ಮುಂದುವರಿದಿದೆ. ಆದರೆ, ಬದನೆಕಾಯಿ ದರ ಕೆ.ಜಿಗೆ ₹60ರಿಂದ ₹70, ಗಜ್ಜರಿ ₹40ರಿಂದ ₹50, ಬೆಂಢೆಕಾಯಿ ₹60ರಿಂದ ₹80, ಬೀನ್ಸ್ ₹80ಕ್ಕೆ ಏರಿಕೆಯಾಗಿದೆ. ₹25ರಿಂದ ₹30ಕ್ಕೆ ಒಂದು ಕೆ.ಜಿ ಆಲೂಗಡ್ಡೆ ಮಾರಾಟವಾಗುತ್ತಿದೆ.
ಕಳೆದೊಂದು ವಾರದಿಂದ ಮಾರುಕಟ್ಟೆಯಲ್ಲಿ ವಿವಿಧ ತರಕಾರಿಗಳ ದರ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದೇವೆ.ವಿಶಾಲ ಪಾಟೀಲ, ಗ್ರಾಹಕ
ಬೆಳಗಾವಿ ನಗರ ಮಾತ್ರವಲ್ಲ, ಜಿಲ್ಲೆಯ ಎಲ್ಲ ಮಾರುಕಟ್ಟೆಗಳಲ್ಲೂ ಇದೇ ಪರಿಸ್ಥಿತಿಯಿದೆ.
‘ಬರದ ಹಿನ್ನೆಲೆಯಲ್ಲಿ ಈ ಬಾರಿ ತರಕಾರಿ ಬೆಳೆ ಇಳುವರಿ ಕುಸಿದಿದೆ. ಎಷ್ಟೋ ಕಡೆ ಒಂದಿಷ್ಟು ಬೆಳೆಯೂ ಬಂದಿಲ್ಲ. ಹಾಗಾಗಿ ತರಕಾರಿ ದರ ಹೆಚ್ಚುತ್ತಲೇ ಇದೆ. ಜನರು ಚೌಕಾಸಿ ಮಧ್ಯೆಯೂ ಖರೀದಿಸುತ್ತಿದ್ದಾರೆ’ ಎಂದು ಕೋತ್ವಾಲ್ ಗಲ್ಲಿಯಲ್ಲಿ ಶನಿವಾರ ತರಕಾರಿ ಮಾರುತ್ತಿದ್ದ ಮಹಿಳೆಯರಾದ ಸುವರ್ಣ ವಣ್ಣೂರ ಹಾಗೂ ಕಮಲವ್ವ ಮಲ್ಲೂರ ಹೇಳಿದರು.
ಅರ್ಧದಷ್ಟು ಬಿತ್ತನೆಯಾಗಿದೆ: ‘ಬೆಳಗಾವಿ, ಖಾನಾಪುರ, ಚನ್ನಮ್ಮನ ಕಿತ್ತೂರು, ಗೋಕಾಕ, ಮೂಡಲಗಿ ತಾಲ್ಲೂಕುಗಳಲ್ಲಿ ಹೆಚ್ಚಾಗಿ ತರಕಾರಿ ಬೆಳೆಯಲಾಗುತ್ತದೆ. ಕಳೆದ ವರ್ಷ ಹಿಂಗಾರು ಹಂಗಾಮಿನಲ್ಲಿ 8,900 ಹೆಕ್ಟೇರ್ನಲ್ಲಿ ತರಕಾರಿ ಬೆಳೆಯಲಾಗಿತ್ತು. ಈ ಬಾರಿಯೂ ಅಷ್ಟೇ ಬಿತ್ತನೆಯಾಗಬಹುದೆಂಬ ಗುರಿ ಹಾಕಿಕೊಂಡಿದ್ದಾರೆ. ಆದರೆ, ಬರದ ಪರಿಸ್ಥಿತಿಯಿಂದಾಗಿ ಶೇ 52ರಷ್ಟು ಮಾತ್ರ ಬಿತ್ತನೆಯಾಗಿದೆ. ಜತೆಗೆ, ಇಳುವರಿಯೂ ಕುಸಿದಿರುವುದು ತರಕಾರಿಗಳ ದರ ಹೆಚ್ಚಲು ಕಾರಣವಾಗಿರಬಹುದು’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.