ಬೆಳಗಾವಿ: ‘ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲ್ಲುವುದಾಗಿ ಹೇಳಿದ್ದಾರೆ. ಅವರು ಪಕ್ಕದ ಮೂರು–ನಾಲ್ಕು ಕ್ಷೇತ್ರ ಸೇರಿಸಿಕೊಂಡು 32 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎನ್ನಬಹುದಿತ್ತು’ ಎಂದು ಶಾಸಕ ಲಕ್ಷ್ಮಣ ಸವದಿ ವ್ಯಂಗ್ಯವಾಡಿದರು.
ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ವಿಜಯೇಂದ್ರ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಎಲ್ಲ ಸ್ಥಾನಗಳನ್ನೂ ಅವರಿಗೆ ಬಿಟ್ಟುಕೊಡಲು ನಾವೇನು ಕಡಲೆ ಪುರಿ ತಿನ್ನುತ್ತ ಕುಳಿತಿದ್ದೇವೆಯೇ’ ಎಂದು ಪ್ರಶ್ನಿಸಿದರು.
‘ಉಪ ಚುನಾವಣೆಯೇ ಬೇರೆ. ಸಾರ್ವತ್ರಿಕ ಚುನಾವಣೆಯೇ ಬೇರೆ. ಉಪ ಚುನಾವಣೆ ಕೇವಲ ಬಿಂದಿಗೆಯಲ್ಲಿನ ನೀರು ತೆಗೆದಂತೆ. ಆದರೆ, ಸಾರ್ವತ್ರಿಕ ಚುನಾವಣೆ ಸಮುದ್ರದಲ್ಲಿನ ನೀರು ತೆಗೆದಂತೆ. ಯಾರು ಗೆಲ್ಲುತ್ತಾರೆ ನೋಡೋಣ’ ಎಂದು ಪುನರುಚ್ಚರಿಸಿದರು.