ಬೆಳಗಾವಿ: ಇಲ್ಲಿನ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಕಾಲೇಜಿನಲ್ಲಿ ದೆಹಲಿಯ ಎ.ಐ.ಸಿ.ಟಿ.ಇ. ಹಾಗೂ ಐ.ಎಸ್.ಟಿ.ಇ. ಪ್ರಾಯೋಜಕತ್ವದಲ್ಲಿ ‘ಸಮಗ್ರ ತ್ಯಾಜ್ಯ ನಿರ್ವಹಣೆ’ ಕುರಿತು ಬುಧವಾರ ಕಾರ್ಯಾಗಾರ ನಡೆಯಿತು.
ಸಿವಿಲ್ ಎಂಜಿನಿಯರಿಂಗ್ ವಿಭಾಗದಿಂದ ಆಯೋಜಿಸಿದ್ದ ಒಂದು ವಾರದ ಕಾರ್ಯಾಗಾರವನ್ನು ಸಂಸ್ಥೆಯ ನಿರ್ದೇಶಕಿ ಡಾ.ಸ್ಫೂರ್ತಿ ಪಾಟೀಲ ಉದ್ಘಾಟಿಸಿ, ‘ಭವಿಷ್ಯದಲ್ಲಿ ತ್ಯಾಜ್ಯ ನಿರ್ವಹಣೆಯು ಬಹು ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಇಂತಹ ಕಾರ್ಯಾಗಾರದಲ್ಲಿ ಅವುಗಳ ನಿರ್ವಹಣೆಯ ಬಗ್ಗೆ ವಿಚಾರಣೆ ನಡೆಯುತ್ತಿರುವುದು ಶ್ಲಾಘನೀಯ. ಎಂಜಿನಿಯರಿಂಗ್ ಬೋಧಕರು ಈ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿ, ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂದು ತಿಳಿಸಿದರು.
ಪ್ರಾಚಾರ್ಯ ಡಾ.ಆನಂದ ದೇಶಪಾಂಡೆ ಮಾತನಾಡಿದರು. ದೆಹಲಿಯ ಎಐಸಿಟಿಇ ನಿರ್ದೇಶಕ ಡಾ.ಪ್ರತಾಪ ಸಿಂಗ ದೇಸಾಯಿ ಹಾಗೂ ಐ.ಎಸ್.ಟಿ.ಇ.ಯ ಪ್ರೊ.ವಿಜಯ ವೈದ್ಯ, ಪ್ರೊ.ಸುಬ್ಬರಾಯ, ಪ್ರೊ.ನಿಂಗಾರೆಡ್ಡಿ, ಪ್ರೊ.ಅರವಿಂದ ಜಾಧವ, ಡಾ.ಸಂಜಯ ಪೂಜಾರಿ, ಪ್ರೊ.ಸಾಗರ ಬಿರ್ಜೆ ಪಾಲ್ಗೊಂಡಿದ್ದರು.
ಬೆಂಗಳೂರಿನ ಪ್ರಕೃತಿ ಪರಿಸರ ಸಂಸ್ಥೆ ಅಧ್ಯಕ್ಷ ಪ್ರೊ.ಬಿ.ಎನ್. ರಮೇಶಕುಮಾರ, ಜೈನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಸಂಗಮಿ, ಕಾರ್ಯಾಗಾರದ ಸಂಯೋಜನಾಧಿಕಾರಿ ಡಾ.ಬಿ.ಟಿ. ಸುರೇಶ ಬಾಬು ಮಾತನಾಡಿದರು.