ಬೆಳಗಾವಿ: ‘ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಕಾನೂನಿನಲ್ಲಿ ಅವಕಾಶವಿಲ್ಲ.ಯೋಜನಾ ನಿರಾಶ್ರಿತರಿಗೆ ಮಾತ್ರ ಇದೆ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಪ್ರವಾಹ ಪೀಡಿತರಿಗೆ ಪರಿಹಾರ ನೀಡಲು ಅವಕಾಶವಿದೆ. ಈಗಾಗಲೇ ಪರಿಹಾರ ಒದಗಸಲಾಗಿದೆ. ಈ ಬಾರಿ ನೆರೆಯಿಂದ ಸಂತ್ರಸ್ತರಾದವರಿಗೂ ನೆರವು ಕೊಡಲಾಗುತ್ತಿದೆ’ ಎಂದರು.
‘ಜನರು ನದಿಯನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದರಿಂದ ನೀರು ಬರುತ್ತಿದೆ. ನದಿ ತೀರದ ಹತ್ತಿರದಲ್ಲಿ ಯಾರೂ ಮನೆ ಕಟ್ಟಿಕೊಳ್ಳಬಾರದು. ಎತ್ತರದ ಪ್ರದೇಶದಲ್ಲಿ ಮನೆಗಳನ್ನು ಕಟ್ಟಿಕೊಳ್ಳಬೇಕು’ ಎಂದು ಕೋರಿದರು.
‘ಮಲಪ್ರಭಾ ನದಿಯ ಹೂಳೆತ್ತಲು ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮೀಕ್ಷೆ ಕಾರ್ಯ ನಡೆದಿದೆ. ಇನ್ನೂ ಪೂರ್ಣಗೊಂಡಿಲ್ಲ. ವರದಿ ಕೈಸೇರುತ್ತಿದ್ದಂತೆಯೇ ಹೂಳೆತ್ತುವ ಕಾರ್ಯ ಪ್ರಾರಂಭ ಮಾಡುತ್ತೇವೆ’ ಎಂದರು.