ಬೆಳಗಾವಿ: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆದಿಸಿರುವುದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಶಿವಕುಮಾರ್ ನಮಗೆ ಹೆದರಿಕೊಳ್ಳಬೇಕು ಎಂದು ಹೇಳಿಲ್ಲ. ಅವರ ಮೇಲೆ ಪ್ರೀತಿ–ವಿಶ್ವಾಸ ಅಥವಾ ಸಂಬಂಧವಾಗಲಿ ನಮಗಿಲ್ಲ’.
– ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಇಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ್ದು ಹೀಗೆ.
‘ಪ್ರಕರಣವನ್ನು ಹತ್ತು ತಿಂಗಳ ಹಿಂದೆಯೇ ಸಿಬಿಐಗೆ ವಹಿಸಲಾಗಿದೆ. ಅಲ್ಲಿಂದ ಆ ಸಂಸ್ಥೆಯವರು ಮಾಹಿತಿ ಕಲೆ ಹಾಕಿದ್ದಾರೆ. ಈಗ ದಾಳಿ ನಡೆಸಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಕಾಗೆ ಕುಳಿತಿದ್ದಕ್ಕೆ ಕೊಂಬೆ ಮುರಿಯಿತು ಎನ್ನಲಾಗುವುದಿಲ್ಲ. ಕಾಂಗ್ರೆಸ್ನವರು ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರಷ್ಟೆ’ ಎಂದರು.
‘ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಬಿಜೆಪಿ ಸೇರಲು ಯತ್ನಿಸುತ್ತಿರುವುದು ನನಗೆ ಗೊತ್ತಿಲ್ಲ. ಈ ವಿಚಾರ ನನ್ನೊಂದಿಗಾಗಲಿ, ಕೇಂದ್ರ ಸಚಿವರ ಜೊತೆಗಾಗಲಿ ಚರ್ಚಿಸಿಲ್ಲ. ಸದ್ಯಕ್ಕೆ ಅಲ್ಲಿ (ಧಾರವಾಡದಲ್ಲಿ) ಸೀಟು ಖಾಲಿಯೂ ಇಲ್ಲ. ಅಲ್ಲಿ ಬಂದು ಏನು ಮಾಡುತ್ತಾರೆ? ಎಂದು ಅಚ್ಚರಿಯಿಂದ ಕೇಳಿದರು.