ಬೆಳಗಾವಿ: ‘ಅಲ್ಪಸಂಖ್ಯಾತರ ಸಂಘಗಳು ಹಾಗೂ ಶಿಕ್ಷಣ ಸಂಸ್ಥೆಗಳ ಪ್ರಗತಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು’ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಧನ್ಯಕುಮಾರ ಗುಂಡೆ ತಿಳಿಸಿದರು.
ನಗರದ ಭರತೇಶ ಶಿಕ್ಷಣ ಸಂಸ್ಥೆಯಲ್ಲಿ ಈಚೆಗೆ ನಡೆದ ಸಂಸ್ಥಾಪಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಅಲ್ಪಸಂಖ್ಯಾತರ ಸಂಸ್ಥೆಗಳು ಸರ್ಕಾರದ ಯೋಜನೆಗಳಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಎಲ್ಲರೂ ಕೂಡಿ ಕೆಲಸ ಮಾಡಬೇಕು’ ಎಂದು ನುಡಿದರು.
‘ಅಲ್ಪಸಂಖ್ಯಾತರು ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳು ಮತ್ತು ನಿರೀಕ್ಷೆಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಆಯೋಗದೊಂದಿಗೆ ಹಂಚಿಕೊಂಡಲ್ಲಿ ಸಹಾಯ–ನೆರವು ಒದಗಿಸಲು ಸಹಕಾರಿ ಆಗುತ್ತದೆ’ ಎಂದು ಹೇಳಿದರು.
ಭರತೇಶ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ರಾಜೀವ ದೊಡ್ಡಣ್ಣವರ, ‘ದಿ.ಕೋಮಲಣ್ಣ ದೊಡ್ಡಣ್ಣವರ ಅವರು ಸಂಸ್ಥೆಯ ದೀರ್ಘ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಪ್ರಗತಿಗೆ ಶ್ರಮಿಸಿದ ಹಿನ್ನೆಲೆಯಲ್ಲಿ ಅವರ ಜನ್ಮ ದಿನವನ್ನು ಸಂಸ್ಥಾಪಕರ ದಿನವಾಗಿ ಆಚರಿಸಲಾಗುತ್ತಿದೆ’ ಎಂದರು.
‘ಸಂಸ್ಥೆಯಿಂದ 2005ರಿಂದ 1,200 ವಿದ್ಯಾರ್ಥಿಗಳಿಗೆ ₹ 2 ಕೋಟಿ ವಿದ್ಯಾರ್ಥಿವೇತನ ನೀಡಲಾಗಿದೆ. ಸಂಸ್ಥೆಯ ಇತಿಹಾಸದಲ್ಲಿಯೇ ಇದು ದಾಖಲೆ’ ಎಂದು ತಿಳಿಸಿದರು.
ಅಖಿಲ ಭಾರತ ಜೈನ ಯುವ ಒಕ್ಕೂಟದ ಅಧ್ಯಕ್ಷ ಮಹೇಂದ್ರ ಸಿಂಘಿ, ಕುಟುಂಬದ ಪರವಾಗಿ ದೇಣಿಗೆ ಕೊಡುವುದಾಗಿ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಭಟ್ಟಾಕಳಂಕ ಭಟ್ಟಾರಕ ಮುನಿ ಮಾತನಾಡಿದರು. ಟ್ರಸ್ಟ್ಗೆ 25 ವರ್ಷ ಕಾರ್ಯನಿರ್ವಹಿಸಿದ ನೌಕರರು, ಈ ವರ್ಷ ನಿವೃತ್ತರಾದವರು ಹಾಗೂ ಪಿಎಚ್.ಡಿ ಪಡೆದವರನ್ನು ಸನ್ಮಾನಿಸಲಾಯಿತು.
ಖಜಾಂಚಿ ಭೂಷಣ ಮಿರ್ಜಿ ಸ್ವಾಗತಿಸಿದರು. ಆಡಳಿತ ಮಂಡಳಿ ಸದಸ್ಯ ವಿನೋದ ದೊಡ್ಡಣ್ಣವರ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಶ್ರೀಪಾಲ ಖೇಮಲಾಪುರೆ, ಸದಸ್ಯರಾದ ಅಶೋಕ ದಾನವಾಡೆ, ಹೀರಾಚಂದ ಕಲಮನಿ ಪರಿಚಯಿಸಿದರು. ಸದಸ್ಯೆ ಡಾ.ಸಾವಿತ್ರಿ ದೊಡ್ಡಣ್ಣವರ ವಂದಿಸಿದರು.