ಬೈಲಹೊಂಗಲ: ತಾಲ್ಲೂಕಿನ ಉಡಿಕೇರಿ ಗ್ರಾಮದಲ್ಲಿ ಮಂಗಳವಾರ ನಸುಕಿನಲ್ಲಿ ಮಹಿಳೆಯೊಬ್ಬರ ಕುತ್ತಿಗೆಗೆ ಚಾಕು ಇರಿದು, ಚಿನ್ನದ ಮಾಂಗಲ್ಯ ದೋಚುವ ಯತ್ನ ನಡೆದಿದೆ. ಮಾಂಗಲ್ಯ ಸರ ಉಳಿಸಿಕೊಳ್ಳಲು ಇಬ್ಬರು ಕಳ್ಳರೊಂದಿಗೆ ಹೋರಾಡಿದ ಮಹಿಳೆ ತೀವ್ರ ಗಾಯಗೊಂಡಿದ್ದಾರೆ.
ರೇಣುಕಾ ಕೆಂಚಪ್ಪ ದೋಡ್ಲಿ (27) ದುಷ್ಕರ್ಮಿಗಳಿಗೆ ಪ್ರತಿರೋಧ ವ್ಯಕ್ತಪಡಿಸಿ, ತಮ್ಮ ಮಾಂಗಲ್ಯ ಸರ ಉಳಿಸಿಕೊಂಡ ಮಹಿಳೆ.
ಗ್ರಾಮದ ಹೆದ್ದಾರಿಯಲ್ಲಿ ರೇಣುಕಾ ಕೆಂಚಪ್ಪ ದೋಡ್ಲಿ (27), ಗೀತಾ ಸೋಮಲಿಂಗಪ್ಪ (28) ಎಂದಿನಂತೆ ಬೆಳಗಿನ ಜಾವ ವಾಯುವಿಹಾರಕ್ಕೆ ತೆರಳಿದ್ದರು.
ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರೇಣುಕಾ ಅವರ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ದೋಚಲು ಮುಂದಾದರು. ಕುತ್ತಿಗೆಗೆ ಕೈ ಹಾಕಿದ ಕಳ್ಳನನ್ನು ರೇಣುಕಾ ಗಟ್ಟಿಯಾಗಿ ಹಿಡಿದುಕೊಂಡರು. ಅವರಿಂದ ಬಿಡಿಸಿಕೊಳ್ಳಲು ಕಳ್ಳರು ಕುತ್ತಿಗೆ, ಕೈಗೆ ಜಾಕುವಿನಿಂದ ಇರಿದು, ನಂತರ ಪರಾರಿಯಾದರು.
ರೇಣುಕಾ ಅವರ ಕತ್ತು ಹಾಗೂ ಕೈಯಿಂದ ರಕ್ತ ಹರಿದಿದೆ. ಈ ವಿಡಿಯೊ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.
ಪಿಎಸ್ಐ ಪ್ರವೀಣ ಕೋಟಿ ಭೇಟಿ ನೀಡಿ ಪರಿಶೀಲಿಸಿದಾಗ ಮಾಂಗಲ್ಯ ಸರ ಸ್ಥಳದಲ್ಲಿಯೇ ಸಿಕ್ಕಿದೆ. ಗಾಯಾಳು ಮಹಿಳೆಯನ್ನು ಬೆಳವಡಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಪ್ರಕರಣ ದೊಡವಾಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.