ಮೈಸೂರು: ‘ಎಸ್ಡಿಪಿಐ ಮತ್ತು ಪಿಎಫ್ಐ ಎರಡೂ ಬಿಜೆಪಿಯ ‘ಬಿ’ ಟೀಂಗಳು’ ಎಂದು ಕಾಂಗ್ರೆಸ್ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಟೀಕಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಆ ಸಂಘಟನೆಗಳಿಂದಾಗಿಯೇ ಕೋಮುವಾದಿ ಬೇಳೆ ಬೇಯುತ್ತಿದೆ’ ಎಂದು ಆರೋಪಿಸಿದರು.
‘ಬಿಜೆಪಿಯವರಿಗೆ ನಿಜವಾಗಿಯೂ ಬದ್ಧತೆ ಇದ್ದಿದ್ದರೆ ಸರ್ಕಾರ ಬಂದಾಗಲೇ ಪಿಎಫ್ಐ ಸಂಘಟನೆ ನಿಷೇಧಿಸಬೇಕಿತ್ತು. ಆದರೆ, ಚುನಾವಣೆ ಸಮೀಪ ಬರುವಾಗ ಗಿಮಿಕ್ ಮಾಡುತ್ತಿದ್ದಾರೆ. ನಾವು ಗಟ್ಟಿಯಾಗಿದ್ದೇವೆ ಎಂದು ತೋರಿಸಿಕೊಳ್ಳಲು ಈ ರೀತಿ ಆಡುತ್ತಿದ್ದಾರೆ’ ಎಂದು ದೂರಿದರು.
‘ಭಾರತ್ ಜೋಡೊ ಯಾತ್ರೆ ತಡೆಯಲು ಬಿಜೆಪಿ ಯತ್ನಿಸುತ್ತಿದೆ. ಅದಕ್ಕಾಗಿಯೇ ಗುಂಡ್ಲುಪೇಟೆಯಲ್ಲಿ ಬ್ಯಾನರ್ ಹರಿಯುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ಗೆ ಸಿಗುತ್ತಿರುವ ಜನ ಬೆಂಬಲ ನೋಡಿ ಬಿಜೆಪಿಯವರಿಗೆ ಹೊಟ್ಟೆ ಉರಿಯುತ್ತಿದೆ’ ಎಂದು ಟೀಕಿಸಿದರು.
ದಸರಾದಲ್ಲಿ ಅವ್ಯವಸ್ಥೆ: ಆರೋಪ
‘ನಾಡಹಬ್ಬ ದಸರೆಯಲ್ಲೂ ಕಮಿಷನ್ ದಂಧೆ ನಡೆಯುತ್ತಿರುವುದು ನನಗೂ ಕೇಳಿಬಂದಿದೆ. ಸಾಕಷ್ಟು ಅವ್ಯವಸ್ಥೆಗಳೂ ಕಂಡುಬಂದಿವೆ. ಇದರಿಂದ ಮೈಸೂರಿನ ಮಾನ ಹೋಗಿದೆ. ಈ ಬಾರಿ ವ್ಯವಸ್ಥಿತವಾಗಿ ದಸರಾ ನಡೆಸಲು ಸರ್ಕಾರ ವಿಫಲವಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರೇ ನೇರ ಹೊಣೆಗಾರರು’ ಎಂದು ಹೇಳಿದರು.
ಯತೀಂದ್ರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಎಸ್.ಟಿ.ಸೋಮಶೇಖರ್, ‘ಕಾಮಾಲೆ ಕಣ್ಣಿನವರಿಗೆ ಕಾಣುವುದೆಲ್ಲಾ ಹಳದಿ ಬಣ್ಣದೇ ಆಗಿರುತ್ತದೆ. ದಸರೆಯಲ್ಲಿ ಎಲ್ಲ ಕಾರ್ಯಕ್ರಮಗಳೂ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿವೆ. ಯಾವುದೇ ಲೋಪ ಕಂಡುಬಂದರೂ, ಕೂಡಲೇ ಸರಿಪಡಿಸುತ್ತಿದ್ದೇವೆ’ ಎಂದರು.