ಬೆಳಗಾವಿ: ‘ಪ್ರಸ್ತುತ ದಿನಗಳಲ್ಲಿ ಯುವಕ, ಯುವತಿಯರು ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಬೇಕಾದರೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಉತ್ಸಾಹದಿಂದ ಭಾಗವಹಿಸಬೇಕು’ ಎಂದು ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ಇಲ್ಲಿನ ಶಿವಬಸವ ನಗರದ ಡಾ.ಎಸ್.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಯುವಸೌರಭ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಯುವಪೀಳಿಗೆ ಗುಣಾತ್ಮಕ ಶಿಕ್ಷಣ ಪಡೆಯುವ ಜತೆಗೆ, ಸಾಂಸ್ಕೃತಿಕ ಮನೋಭಾವ ಬೆಳೆಸಿಕೊಳ್ಳಬೇಕು. ಮೊಬೈಲ್, ಟಿ.ವಿ ನೋಡುತ್ತ ಸಮಯ ವ್ಯರ್ಥಗೊಳಿಸದೆ, ಸೃಜನಶೀಲತೆ ಬೆಳೆಸಿಕೊಳ್ಳಬೇಕು. ನಮ್ಮ ನೆಲದ ಪ್ರತಿಭೆಗಳನ್ನು ಬೆಳಕಿಗೆ ತರಲು ಈ ಕಾರ್ಯಕ್ರಮ ವೇದಿಕೆ ಕಲ್ಪಿಸಿದೆ. ಮುಂದೆ ದೊಡ್ಡ ವೇದಿಕೆಗಳಲ್ಲಿ ನೀವೆಲ್ಲರೂ ಮಿಂಚಬೇಕು’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಎಸ್.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜಿನ ಪ್ರಭಾರ ಪ್ರಾಚಾರ್ಯ ರಾಜೇಂದ್ರ ಗಲಗಲಿ, ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸಿದ್ದರಾಮ ರೆಡ್ಡಿ, ಕಲಾವಿದರಾದ ಗೋಪಾಲ ಚಿಪನಿ, ರೋಹಿಣಿ ಗಂಗಾಧರಯ್ಯ ಉಪಸ್ಥಿತರಿದ್ದರು.
ಗ್ರಾಮೀಣ ಸಂಸ್ಕೃತಿ ಅನಾವರಣ: ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ವಿವಿಧ ಕಲಾತಂಡದವರ ಪ್ರದರ್ಶನ ಮನಸೆಳೆಯಿತು. ಗ್ರಾಮೀಣ ಸಂಸ್ಕೃತಿ ಅನಾವರಣಗೊಂಡಿತು.
ವೃಂದಾ ಕಮತೆ ತಂಡದವರು ಪ್ರಸ್ತುತಪಡಿಸಿದ ಸಂಗೀತ, ರೂಪಾ ಕಡಗಾವಿಯವರ ಸುಗಮ ಸಂಗೀತ, ಪುಂಡಲಿಕ ದೊಡಮನಿ ಅವರ ಜಾನಪದ ಗೀತೆಗಳ ಗಾಯನ, ಪ್ರಿಯಾಂಕಾ ತಿಲಗರ ಅವರ ಜಾನಪದ ಸಂಗೀತ, ಜ್ಯೋತಿ ಹಿರೇಮಠ ಅವರ ವಚನ ಗಾಯನ, ಪ್ರಣವ ನಾಯಕ ತಂಡದವರ ವಚನ ಸಂಗೀತ ಪ್ರೇಕಕರನ್ನು ಸೆಳೆದವು.
ಈರಣ್ಣ ಹಟ್ಟಿಗೌಡ್ರ ಅವರ ವೀರಗಾಸೆ, ಅರಣ್ಯ ಸಿದ್ಧೇಶ್ವರ ತಂಡದ ಹೆಜ್ಜೆಮೇಳ, ನಿನಾದ ಅಶೋಕ, ಅನುಶ್ರೀ ಖಡಬಡಿ ತಂಡದ ಸಮೂಹ ನೃತ್ಯ ಮತ್ತು ನಾಗಪ್ಪ ಲಿಂಡೆನ್ನವರ ತಂಡ ಪ್ರದರ್ಶಿಸಿದ ನಾಟಕ ಗಮನಸೆಳೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.