ಬೆಳಗಾವಿ: ವಿದ್ಯಾರ್ಥಿಗಳು ಉನ್ನತವಾದ ಕನಸು ಕಾಣಬೇಕು ಮತ್ತು ನನಸು ಮಾಡಿಕೊಳ್ಳಲು ಶ್ರಮಿಸಬೇಕು ಎಂದು ಹುಬ್ಬಳ್ಳಿ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಬಿ.ಎಲ್. ದೇಸಾಯಿ ಸಲಹೆ ನೀಡಿದರು.
ಇಲ್ಲಿನ ಲಿಂಗರಾಜ ಮಹಾವಿದ್ಯಾಲಯದ ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಬುಧವಾರ ಆಯೋಜಿಸಿದ್ದ ಪರಿಚಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಸುತ್ತಮುತ್ತಲಿನ, ದೈನಂದಿನ ವಿದ್ಯಮಾನಗಳನ್ನು ಮಾಧ್ಯಮಗಳ ಮೂಲಕ ಸರಿಯಾಗಿ ತಿಳಿದುಕೊಳ್ಳಬೇಕು. ಸಾಮಾನ್ಯಜ್ಞಾನ ಮತ್ತು ಔದ್ಯೋಗಿಕ ಕೌಶಲಗಳನ್ನು ಕಲಿಯಬೇಕು. ಸಾಮಾಜಿಕ ಮತ್ತು ದೇಶದ ಆರ್ಥಿಕ ಬೆಳವಣಿಗೆಯನ್ನು ಅರಿಯಬೇಕು’ ಎಂದು ತಿಳಿಸಿದರು.
‘ವಾಣಿಜ್ಯ ವಿಷಯದ ವಿದ್ಯಾರ್ಥಿಗಳು ಪ್ರಮುಖವಾಗಿ ನಿರ್ವಹಣಾ ಕೌಶಲ ಬೆಳೆಸಿಕೊಳ್ಳುವ ಜತೆಗೆ ಶಿಸ್ತು, ಸಂಯಮ ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಪ್ರಾಧ್ಯಾಪಕಿ ಗುರುದೇವಿ ಹುಲೆಪ್ಪನವರಮಠ ಕಾಲೇಜಿನ ಪರಿಚಯ ಮಾಡಿಕೊಟ್ಟರು. ಸೌಲಭ್ಯಗಳ ಕುರಿತು ತಿಳಿಸಿದರು.
ಉಪನ್ಯಾಸಕರಾದ ಗೌತಮಿ, ಅನುರಾಧಾ, ಲತಾ, ವಿನಾಯಕ, ಸಂಗೀತಾ ಶೆಟ್ಟಿ, ದಿವ್ಯಾ, ನಿಖಿತಾ, ನಮ್ರತಾ, ರೂಪಾ ವಿದ್ಯಾರ್ಥಿಗಳೊಂದಿಗೆ ಗುಂಪು ಸಂವಾದ ನಡೆಸಿದರು.
ಪ್ರಾಚಾರ್ಯ ಜಿ.ಎನ್. ಶೀಲಿ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಆರ್.ಎಂ ಪಾಟೀಲ ವಂದಿಸಿದರು.