ನಿಪ್ಪಾಣಿ: ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು ನೀರಿನ ಪ್ರಮಾಣದ ಬೇಡಿಕೆಯ ವಿವರಗಳನ್ನು, ಯೋಜನೆಗಳ ದಾಖಲಾತಿಗಳನ್ನು ಉತ್ತರ/ಪ್ರತ್ಯುತ್ತರಗಳನ್ನು ನ್ಯಾಯಮಂಡಳಿಗೆ ಸಲ್ಲಿಸಿವೆ’ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ಸದನದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
‘2013–14ನೇ ಸಾಲಿನ ದರ ಪಟ್ಟಿಯ ದರಗಳನ್ವಯ ಕಳಸಾ ನಾಲಾ ಯೋಜನೆಗೆ ರೂ.475.93 ಕೋಟಿ ಹಾಗೂ ಬಂಡೂರಿ ಯೋಜನೆಗೆ ₹365 ಕೋಟಿ ಆಗುವುದೆಂದು ಅಂದಾಜಿಸಲಾಗಿದೆ. 16.12.2010ರ ಕೇಂದ್ರ ಅಧಿಸೂಚನೆಯಲ್ಲಿ ರಚಿಸಲಾಗಿರುವ ಮಹಾದಾಯಿ ಜಲ ವಿವಾದ ನ್ಯಾಯಾಧೀಕರಣವು 6.9.2012ರಿಂದ ಕಾರ್ಯನಿರ್ವಹಿಸುತ್ತಿದೆ’ ಎಂದು ಅವರು ತಿಳಿಸಿದರು.
‘ಕಳಸಾ ನಾಲಾ ಯೋಜನೆಯ ಕೂಡು ಕಾಲುವೆ ಕಾಮಗಾರಿಯನ್ನು ಅಕ್ಟೋಬರ್ 2006ರಲ್ಲಿ ಅರಣ್ಯೇತರ ಪ್ರದೇಶದಲ್ಲಿ ಕೈಗೊಳ್ಳಲಾಗಿದೆ. ಕಳಸಾ ಯೋಜನೆಯ ಪ್ರಮುಖ ಭಾಗವಾದ ಕಳಸಾ ಕೂಡು ಕಾಲುವೆಯ 5.15 ಕಿ.ಮೀ. ನಿರ್ಮಾಣ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಹೆಡ್ ರೆಗ್ಯೂಲೇಟರ್ ಟ್ರಫ್ ಹಾಗೂ ಇನ್ಲೆಟ್ ಕಾಮಗಾರಿಗಳು ಪ್ರಗತಿಯಲ್ಲಿವೆ.