ಬೆಳಗಾವಿ: ವಡಗಾವಿಯ ಮುಖ್ಯ ರಸ್ತೆಯಲ್ಲಿ ಮದ್ಯದ ಅಂಗಡಿ ಪ್ರಾರಂಭಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಒತ್ತಾಯಿಸಿ ಅಲ್ಲಿನ ನಿವಾಸಿಗಳು ಅಂಗಡಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಮದ್ಯದ ಅಂಗಡಿ ಕಾರ್ಯನಿರ್ವಹಿಸಲು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಅದಕ್ಕಾಗಿ ಪೊಲೀಸ್ ರಕ್ಷಣೆ ನೀಡಬೇಕು ಎಂದು ಅಂಗಡಿ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಆದೇಶದ ಮೇರೆಗೆ ರಕ್ಷಣೆ ನೀಡಲು ಬಂದ ಪೊಲೀಸರಿಗೆ ಮಹಿಳೆಯರು ಆಸ್ಪದ ನೀಡಲಿಲ್ಲ. ಮದ್ಯದಗಂಡಿ ಶಾಶ್ವತವಾಗಿ ಬಂದ್ ಮಾಡಬೇಕು ಎಂದು ಪ್ರತಿಭಟನೆ ನಡೆಸಿದರು.
ಅಂಗಡಿ ಪ್ರಾರಂಭಕ್ಕೆ ಅವಕಾಶ ನೀಡದೆ ಮಹಿಳೆಯರು ಗುರುವಾರ ಬೆಳಗ್ಗೆಯಿಂದಲೇ ಅಂಗಡಿ ಎದುರು ಪ್ರತಿಭಟನೆ ಆರಂಭಿಸಿದರು. ಮಧ್ಯಾಹ್ನದ ಹೊತ್ತಿಗೆ ಆಗಮಿಸಿದ ಪೊಲೀಸರು, ಹೈಕೋರ್ಟ್್ ಆದೇಶದ ಮೇರೆಗೆ ಈ ಅಂಗಡಿ ಪ್ರಾರಂಭಕ್ಕೆ ಅವಕಾಶ ನೀಡಬೇಕು ಮತ್ತು ಪ್ರತಿಭಟನೆ ಹಿಂಪಡೆಯಬೇಕು ಎಂದು ತಿಳಿಸಿದರು. ಆದರೆ, ಪ್ರತಿಭಟನಾಕಾರರು ಪೊಲೀಸರ ಮಾತಿಗೆ ಸೊಪ್ಪು ಹಾಕದೇ ಪ್ರತಿಭಟನೆ ಮುಂದುವರಿಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಬರಬೇಕು ಎಂದು ಪಟ್ಟು ಹಿಡಿದರು .
ಸ್ಥಳಕ್ಕೆ ಆಗಮಿಸಿದ ಡಿಎಸ್ಪಿ ಎಂ.ಮುತ್ತುರಾಜ್ ಅವರು ಹೈಕೋರ್ಟ್್ ಆದೇಶವನ್ನು ಓದಿ, ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಇದಕ್ಕೆ ಬಗ್ಗದ ಪ್ರತಿಭಟನಾಕಾರರು, ಯಾವುದೇ ಕಾರಣಕ್ಕೂ ಮದ್ಯದ ಅಂಗಡಿ ಪ್ರಾರಂಭಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಸಹ ನಡೆಯಿತು. ಮಹಿಳೆಯರ ಮತ್ತು ಸಾರ್ವಜನಿಕರ ತೀವ್ರ ಪ್ರತಿಭಟನೆ ಮುಂದುವರಿದಿದ್ದರಿಂದ ಪೊಲೀಸರು ಮದ್ಯದ ಅಂಗಡಿ ಪ್ರಾರಂಭದ ಗೋಜಿಗೆ ಹೋಗದೆ ಮರಳಿದರು. ವಡಗಾವಿಯಲ್ಲಿ ಮದ್ಯದ ಅಂಗಡಿ ಪ್ರಾರಂಭಿಸಬಾರದು ಎಂದು ಕಳೆದ ಮೂರ್ನಾಲ್ಕು ತಿಂಗಳಿನಿಂದ ಅಲ್ಲಿನ ಮಹಿಳೆಯರು ಪ್ರತಿಭಟನೆ ನಡೆಸುತ್ತ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಸಾರಿಕಾ ಪಾಟೀಲ, ನೀತಾ. ಎಸ್, ರೋಹಿಣಿ ಗಿಂಡೆ, ಶೋಭಾ ನಾಯಕ, ಪ್ರಿಯಾಂಕ ಲವಾಂಡ, ಮಂಗೇಶ ಪವಾರ, ಬಾಳು ಪವಾರ, ಅನಿಲ ಕುರಣಕರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.