ಬೆಳಗಾವಿ: ನಗರದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ದ್ವಿತೀಯ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ನಗರದ ಸರ್ಕ್ಯೂಟ್ ಹೌಸ್ ಬಳಿ ಫಲಪುಷ್ಪದ ಲೋಕವೇ ಅವತರಿಸಿದೆ. ಸುಗಂಧರಾಜ ಹೂವುಗಳಿಂದ ನಿರ್ಮಿಸಿರುವ ರಾಣಿ ಕಿತ್ತೂರು ಚನ್ನಮ್ಮ, ಬಣ್ಣ-ಬಣ್ಣದ ಗುಲಾಬಿ ಹೂವುಗಳನ್ನು ಜೋಡಿಸಿ ತಯಾರಿಸಿರುವ ಬೃಹತ್ ನಂದಿ, ಭುವನೇಶ್ವರಿ ದೇವಿ ಇಲ್ಲಿಯ ಪ್ರಮುಖ ಆಕರ್ಷಣೆಗಳಾಗಿವೆ.
ವೈವಿಧ್ಯಮಯ ವಿದೇಶಿ ಪುಷ್ಪಗಳ ಜೊತೆಗೆ ಎದ್ದು ಕಾಣುವ ದೇಸಿ ಹೂಗಳು ಪ್ರದರ್ಶನದಲ್ಲಿದ್ದು, ಪ್ರೇಕ್ಷಕರನ್ನು ಸೆಳೆಯುತ್ತಿವೆ.ತೋಟಗಾರಿಕೆ ಇಲಾಖೆ ವತಿಯಿಂದ ನಡೆದಿರುವ ಫಲಪುಷ್ಪ ಪ್ರದರ್ಶನವನ್ನು ಲೋಕೋಪಯೋಗಿ ಸಚಿವ ಸಿ. ಎಂ. ಉದಾಸಿ ಶುಕ್ರವಾರ ಮುಂಜಾನೆ ಉದ್ಘಾಟಿಸಿದರು.ಗೃಹ ಸಚಿವ ಆರ್. ಅಶೋಕ್, ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಉಮೇಶ ಕತ್ತಿ, ಸಕ್ಕರೆ ಸಚಿವ ಎಸ್. ವಿ. ರವೀಂದ್ರನಾಥ್, ನಟ ಜಗ್ಗೇಶ್ ಹೂವು-ಹಣ್ಣಿನ ಲೋಕದಲ್ಲಿ ಕುತೂಹಲದಿಂದ ಓಡಾಡಿ ಮೆಚ್ಚುಗೆ ಸೂಚಿಸಿದರು.
ತೋಟಗಾರಿಕೆ ನಿರ್ದೇಶಕ ಡಾ. ಎನ್. ಜಯರಾಮ್, ಹೆಚ್ಚುವರಿ ನಿರ್ದೇಶಕ ಡಿ. ಎಲ್. ಪುಟ್ಟಣ್ಣ, ಜಂಟಿ ನಿರ್ದೇಶಕ ಕೆ. ಎಸ್. ಅಶ್ವತ್ಥ್, ಟಿ. ಬಸವರಾಜ್, ಉಪನಿರ್ದೇಶಕರಾದ ಎಚ್. ಷಣ್ಮಖಪ್ಪ, ದೊಡ್ಡಮನಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.