ಬೆಳಗಾವಿ: ಕಳೆದ ಒಂದು ವಾರದಿಂದ ಬೆಳಗಾವಿಯಲ್ಲಿ ಪ್ರತಿಧ್ವನಿಸುತ್ತಿರುವ ಭಾಷಾ ವಿವಾದದ ಇನ್ನೊಂದು ರೂಪ ಬುಧವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿಯೂ ಕಂಡುಬಂದಿತು.
ಸಭೆ ಆರಂಭವಾಗುತ್ತಿದ್ದಂತೆಯೇ ಸದಸ್ಯರಾದ ಯಲ್ಲಪ್ಪ ಕೋಳೇಕರ ಅವರು ಹಿಂದಿನ ತಿಂಗಳ ಸಭೆಯ ನಡಾವಳಿಗಳನ್ನು ತಿಳಿಸಬೇಕು ಎಂದು ಹೇಳಿದರು.
ಅದನ್ನೇ ಗಾಳವಾಗಿ ಪರಿಗಣಿಸಿದ ಎಂಇಎಸ್ ಬೆಂಬಲಿತ ಕೆಲ ಸದಸ್ಯರು, ಮರಾಠಿ ಭಾಷೆಯಲ್ಲಿಯೂ ನಡಾವಳಿ ಕಾಗದಪತ್ರಗಳನ್ನು ಕೊಡಬೇಕು ಎಂದು ಒತ್ತಾಯಿಸಿದರು.
ಅಪ್ಪಾಸಾಹೇಬ ಕೀರ್ತನೆ, ಲಕ್ಷ್ಮಿ ಮೇತ್ರಿ, ಮನಿಷಾ ಪಾಳೇಕರ, ಸುನೀಲ ಅಷ್ಟೇಕರ, ನಾರಾಯಣ ನಲವಡೆ, ರಾವಜಿ ಪಾಟೀಲ ಎದ್ದು ನಿಂತು ಬೆಂಬಲಿಸಿದರು.
ಮರಾಠಿ ಭಾಷಾ ವಿವಾದವನ್ನು ಕೆದಕಲು ಯತ್ನಿಸಿದವರಿಗೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಎ.ಎಸ್. ಹಲಸೂಡೆ ಅವರು ‘ಇಲ್ಲಿ ಕನ್ನಡ ಮರಾಠಿ ದಾಖಲೆಯ ವಿಷಯ ಇಲ್ಲ, ಹಿಂದಿನ ಸಭೆ ನಡೆದದ್ದು ಆ ವರ್ಷದ ಕಡತಗಳಲ್ಲಿ ಸೇರುತ್ತದೆ, ಈ ವರ್ಷದ ಪ್ರಥಮ ಸಭೆ ಇದಾಗಿದ್ದರಿಂದ ಹೊಸ ವರ್ಷದ ಸಭೆಗಳ ನಡಾವಳಿ ವರದಿಯನ್ನು ಮುಂದಿನ ಸಭೆಯಲ್ಲಿ ಸಲ್ಲಿಸಲಾಗುವುದು ಎಂದು ವಿವರಣೆ ನೀಡಿ ವಾಗ್ವಾದಕ್ಕೆ ಕ್ಷಣವೇ ತೆರೆ ಎಳೆದರು.