ಚಿಕ್ಕೋಡಿ: ರಾಜ್ಯದಲ್ಲಿಯೇ ಅತಿ ವಿಸ್ತಾರ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಿ ಗಡಿನಾಡಿನ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದು ಒತ್ತಾಯಿಸಿ ಮಾಜಿ ಶಾಸಕ ಬಾಳಾಸಾಹೇಬ್ ವಡ್ಡರ ಐದು ದಿನಗಳಿಂದ ನಡೆಸುತ್ತಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಚಿಂಚಣಿ ಮತ್ತು ಚಿಕ್ಕೋಡಿ ಶ್ರೀಗಳ ಮನವಿಗೆ ಸ್ಪಂದಿಸಿ ಸೋಮವಾರ ಹಿಂದಕ್ಕೆ ಪಡೆದಿದ್ದಾರೆ.
‘ಚಿಕ್ಕೋಡಿ ಜಿಲ್ಲೆ ರಚನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಆಶಾದಾಯಕ ಭರವಸೆ ದೊರೆತಿದೆ. ಚಿಂಚಣಿ ಮತ್ತು ಚಿಕ್ಕೋಡಿ ಶ್ರೀಗಳು ಉಪವಾಸ ಸತ್ಯಾಗ್ರಹ ಹಿಂಪಡೆಯಲು ಸಲಹೆ ನೀಡಿದ್ದು, ಅವರ ಸಲಹೆಯಿಂದ ಉಪವಾಸ ಸತ್ಯಾಗ್ರಹ ಹಿಂದಕ್ಕೆ ಪಡೆದಿದ್ದೇನೆ’ ಎಂದು ಬಾಳಾಸಾಸಾಹೇಬ್ ವಡ್ಡರ ತಿಳಿಸಿದರು.
‘ಚಿಕ್ಕೋಡಿ ಜಿಲ್ಲೆ ರಚನೆಗೆ ಒತ್ತಾಯಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಬೇಡಿಕೆ ಈಡೇರುವ ತನಕ ಮುಂದುವರಿಯಲಿದೆ’ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಮುಖಂಡ ಬಿ.ಆರ್.ಸಂಗಪ್ಪಗೋಳ ಹೇಳಿದರು.
ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ ಮತ್ತು ಚಿಕ್ಕೋಡಿಯ ಸಂಪಾದನ ಸ್ವಾಮೀಜಿ ಎಳನೀರು ಕುಡಿಸುವ ಮೂಲಕ ಬಾಳಾಸಾಹೇಬ್ ವಡ್ಡರ ಅವರ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು.
ಮಾಜಿ ಶಾಸಕ ದತ್ತು ಹಕ್ಯಾಗೋಳ, ದಲಿತ ಮುಖಂಡ ಬಸವರಾಜ ಢಾಕೆ, ಬಾಳಾಸಾಹೇಬ್ ಸಂಗ್ರೊಳ್ಳೆ, ಪ್ರೊ.ಎಸ್.ವೈ.ಹಂಜಿ, ಎಂ.ಬಿ.ಪಾಟೀಲ, ತುಕಾರಾಮ ಕೋಳಿ, ಸುರೇಶ ಬ್ಯಾಕೂಡೆ, ಎಂ.ಎ.ಪಾಟೀಲ, ಸಂಜು ಬಡಿಗೇರ್, ಅಪ್ಪಾಸಾಹೇಬ್ ಚೌಗಲಾ, ತ್ಯಾಗರಾಜ್ ಕದಂ, ಪ್ರಶಾಂತ ಹುಕ್ಕೇರಿ ಇದ್ದರು.