ಚಿಕ್ಕೋಡಿ: ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಸಣ್ಣ ಕೈಗಾರಿಕೆ, ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ ಪಟ್ಟಣದಲ್ಲಿ ಉದ್ಘಾಟಿಸಿದರು.
ಇಲ್ಲಿನ ಚಿಕ್ಕೋಡಿ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಮಿತಿಯ ಉಗ್ರಾಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರವನ್ನು ಶುಭಾರಂಭಗೊಳಿಸಿದ ಅವರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ವತಿಯಿಂದ ಪ್ರತಿ ಕ್ವಿಂಟಲ್ ಗೋವಿನ ಜೋಳವನ್ನು ₨ 1310 ರ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗುವುದು.
ರೈತರು ತಾವು ಬೆಳೆದ ಗೋವಿನ ಜೋಳವನ್ನು ಕೇಂದ್ರದಲ್ಲಿ ಮಾರಾಟ ಮಾಡಿ ಸರ್ಕಾರದ ಯೋಜನೆಯ ಲಾಭ ಪಡೆದುಕೊಳ್ಳಬೇಕು. ರೈತರ ಅನುಕೂಲತೆಯ ದೃಷ್ಟಿಯಿಂದ ಅತಿ ಹೆಚ್ಚು ಗೋವಿನ ಜೋಳ ಬೆಳೆಯುವ ಗ್ರಾಮಗಳಿಗೆ ತೆರಳಿ ಖರೀದಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ತಿಳಿಸಿದರು.
ಉಪವಿಭಾಗಾಧಿಕಾರಿ ಡಾ. ರುದ್ರೇಶ್ ಘಾಳಿ, ನಿಪ್ಪಾಣಿ ಎಪಿಎಂಸಿ ಉಪಾಧ್ಯಕ್ಷ ಎ.ಎಲ್. ಪಾಟೀಲ್, ಪುರಸಭೆ ಅಧ್ಯಕ್ಷ ನರೇಂದ್ರ ನೇರ್ಲೆಕರ, ಸದಸ್ಯ ಪಿ.ಐ. ಕೋರೆ, ಬಾಬುರಾವ್ ಖೋತ, ಪಪ್ಪು ಪಾಟೀಲ್, ಶಿರೀಷ್ ಮೆಹತಾ, ರಾಜಗೊಂಡ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಥಣಿ ಶಾಖಾಧಿಕಾರಿ ರಾವಸಾಬ ಝುಂಜರವಾಡ ಸ್ವಾಗತಿಸಿದರು. ತಹಶೀಲ್ದಾರ್ ರಾಜಶೇಖರ ಡಂಬಳ ವಂದಿಸಿದರು.
ತರಾಟೆಗೆ: ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್ಎಕ್ಯೂ ಮೆಕ್ಕೆಜೋಳ ಖರೀದಿ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದ ಕುರಿತು ತಮಗೆ ಸರಿಯಾದ ಮಾಹಿತಿ ನೀಡದೇ ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಕುರಿತು ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಥಣಿ ಶಾಖಾಧಿಕಾರಿ ರಾವಸಾಬ ಝುಂಜರವಾಡ ಅವರನ್ನು ತರಾಟೆಗೆ ತೆಗೆದುಕೊಂಡರು.
ಸರ್ಕಾರಿ ಕಾರ್ಯಕ್ರಮವೊಂದಕ್ಕೆ ಚುನಾಯಿತ ಪ್ರತಿನಿಧಿಗಳಿಗೆ ಸೂಕ್ತ ಮಾಹಿತಿ ನೀಡದೇ ಇರುವ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸ್ಥಳದಲ್ಲೇ ಹಾಜರಿದ್ದ ಉಪವಿಭಾಗಾಧಿಕಾರಿ ಡಾ.ರುದ್ರೇಶ್ ಘಾಳಿ ಅವರಿಗೆ ಸೂಚನೆ ನೀಡಿದರು.