ಸಂಕೇಶ್ವರ: ‘ಇಡಿ ಸಮಾಜ ರಾಜಕಾರಣಿ ಗಳನ್ನು ದುರ್ಬಿನ್ ಹಾಕಿ ನೋಡುತ್ತದೆ. ಆದ್ದರಿಂದ ರಾಜಕಾರಣಿಗಳ ಬದುಕು ಪಾರದರ್ಶಕವಾಗಿರಬೇಕು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ.ಜಿ. ಪರಮೇಶ್ವರ ಹೇಳಿದರು.
ಅವರು ಸಂಕೇಶ್ವರದಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ ಅವರ ಷಷ್ಠಿಪೂರ್ತಿ ಸಮಾರಂಭದಲ್ಲಿ ಮಾತನಾಡಿದರು. ರಾಜಕಾರಣಿಗಳು ಅತ್ಯಂತ ಜವಾಬ್ದಾರಿಯುತ ಜೀವನ ನಡೆಸಬೇಕಾದ ಅಗತ್ಯವಿದೆ. ಈ ಹಿಂದೆ ಎ.ಬಿ.ಪಾಟೀಲ ಅವರು ಗಣಿ ಸಚಿವರಾದರೂ ಯಾವುದೇ ಗಣಿ ದೂಳು ಅಂಟಿಸಿಕೊಳ್ಳದೆ ಉತ್ತಮ ಆಡಳಿತ ನೀಡಿದರು ಎಂದು ಪ್ರಶಂಸಿಸಿ ಮುಂದಿನ ದಿನಗಳಲ್ಲಿ ಎ.ಬಿ.ಪಾಟೀಲ ಅವರ ರಾಜಕೀಯ ಬೆಳವಣಿಗೆಗೆ ಜನರು ಬೆಂಬಲ ನೀಡಬೇಕು ಎಂದರು.
ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರೆಪ್ಪಾ ಮಾತನಾಡಿ, ಲೋಕಸಭೆಯ ಚುನಾವಣೆಯಲ್ಲಿ ಎ.ಬಿ.ಪಾಟೀಲರನ್ನು ಗೆಲ್ಲಿಸುವ ಮೂಲಕ ಷಷ್ಠಿಪೂರ್ತಿ ಕಾಣಿಕೆ ನೀಡಬೇಕು ಎಂದರು.
ಸಮಾರಂಭ ಉದ್ಘಾಟಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಎಚ್.ಕೆ.ಪಾಟೀಲ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ಅಬಕಾರಿ ಸಚಿವ ಸತೀಶ ಜಾರಕಿಹೋಳಿ ಮಾತನಾಡಿದರು.
ಸಹಕಾರ ಸಚಿವ ಎಚ್.ಎಸ್.ಮಹಾದೇವ ಪ್ರಸಾದ್ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಎ.ಬಿ.ಪಾಟೀಲರಿಗೆ ₨ 61 ಲಕ್ಷ ಹಮ್ಮಿಣಿ ಅರ್ಪಿಸಲಾಯಿತು. ಬಳಿಕ ಮಾತನಾಡಿದ ಮಾಜಿ ಸಚಿವ ಎ.ಬಿ. ಪಾಟೀಲ ಅವರು, ಷಷ್ಠಿಪೂರ್ತಿ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ನಿಡಸೋಸಿ ಪಂಚಮ ಶಿವಲಿಂಗೇಶ್ವರ ಮಹಾ ಸ್ವಾಮೀಜಿ, ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿ, ಕೂಡಲಸಂಗಮ ಜಯಮೃತ್ಯುಂಜಯ ಮಹಾಸ್ವಾಮೀಜಿ , ಬೆಳಗಾವಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಸಚಿವ ಪ್ರಕಾಶ ಹುಕ್ಕೇರಿ, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ವಿಧಾನ ಪರಿಷತ್ ಸದಸ್ಯ ವೀರ ಕುಮಾರ ಪಾಟೀಲ, ಜಗದೀಶ್ ಕವಟಗಿಮಠ, ವೀರಣ್ಣ ಮತ್ತಿಗಟ್ಟಿ, ಶಾಸಕರಾದ ಡಾ.ವಿಶ್ವನಾಥ್ ಪಾಟೀಲ, ಫೀರೋಜಶೇಟ್, ಡಿ.ಆರ್.ಪಾಟೀಲ, ಮಹಿಮಾ ಪಟೇಲ್, ಕಾಂಗ್ರೆಸ್ ಜಿಲ್ಲಾ ಘಟ ಕದ ಅಧ್ಯಕ್ಷ ಲಕ್ಷ್ಮಿ ಹೆಬ್ಬಾಳಕರ ಮುಂತಾದವರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.