ಹೊಸಪೇಟೆ: ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿ ಅಂತಿಮ ಅಧಿಸೂಚನೆ ಹೊರಡಿಸುವಂತೆ ಆಗ್ರಹಿಸಿ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಕೂಡ್ಲಿಗಿ ತಾಲ್ಲೂಕಿನ ಸಾರ್ವಜನಿಕರು ಬರೆದಿರುವ 13,396 ಪತ್ರಗಳನ್ನು ಭಾನುವಾರ ಅರಣ್ಯ ಸಚಿವ ಆನಂದ್ ಸಿಂಗ್ ಅವರಿಗೆ ಸಲ್ಲಿಸಲಾಯಿತು.
ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಬಂಗಾರು ಹನುಮಂತು ಹಾಗೂ ಅಲ್ಲಿನ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಪತ್ರಗಳನ್ನು ಸಚಿವರಿಗೆ ಹಸ್ತಾಂತರಿಸಿದರು.
ಬಂಗಾರು ಹನುಮಂತು ಮಾತನಾಡಿ, ‘ಕೂಡ್ಲಿಗಿ ತಾಲ್ಲೂಕು ವಿಜಯನಗರ ಜಿಲ್ಲೆಗೆ ಸೇರ್ಪಡೆ ಆಗಬೇಕೆಂಬುದು ಜನತೆಯ ಕನಸಾಗಿತ್ತು. ಜಿಲ್ಲೆ ಪರವಾದ ಹೋರಾಟಕ್ಕೆ ಎಲ್ಲರೂ ಪಕ್ಷಾತೀತವಾಗಿ ಕೈಜೋಡಿಸಿದ್ದಾರೆ. ಜಿಲ್ಲೆಯ ಕುರಿತಂತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರೂ ಸಹ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಕೂಡ್ಲಿಗಿ ತಾಲ್ಲೂಕಿನ ಜನತೆ ಎಂದಿಗೂ ವಿಜಯನಗರ ಪರವಾಗಿ ಇದ್ದಾರೆ’ ಎಂದು ಭರವಸೆ ನೀಡಿದರು.
‘ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿ ಕೂಡ್ಲಿಗಿ, ಗುಡೇಕೋಟೆ, ಕಾನಹೊಸಹಳ್ಳಿ ಭಾಗದವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಖ್ಯ ಕಾರ್ಯದರ್ಶಿಗೆ ಅನೇಕರು ವೈಯಕ್ತಿಕವಾಗಿ ಪತ್ರ ಬರೆದಿದ್ದಾರೆ. ಈಗ 217 ಹಳ್ಳಿಗಳ ಜನ ಬರೆದಿರುವ ಪತ್ರ ನಿಮಗೆ ಒಪ್ಪಿಸಲಾಗುತ್ತಿದ್ದು, ಕಾರ್ಯದರ್ಶಿಯವರಿಗೆ ಮನವರಿಕೆ ಮಾಡಿಕೊಡಬೇಕು’ ಎಂದರು.
ಕೂಡ್ಲಿಗಿಯ ಜರಲಿ ಪಾಳೆಗಾರ ವಂಶದ ಸಿದ್ದಪ್ಪ ನಾಯಕ, ಕಾನಮಡುಗು ಮಠದ ಸ್ವಾಮಿ ಐಮಡಿ ಶರಣಯ್ಯ ಸ್ವಾಮೀಜಿ, ಗುರುಸಿದ್ಧನಗೌಡ, ಚೆನ್ನಪ್ಪ, ಶಿವರಾಜ್ ಪಾಟೀಲ, ಜಮೀರ್ ಅಹ್ಮದ್, ಮಂಜುನಾಥ್, ವಾಗೀಶ್ ಇದ್ದರು.