ಸಿರುಗುಪ್ಪ: ತಾಲ್ಲೂಕಿನ ಕೊತ್ತಲಚಿಂತ ಗ್ರಾಮದ ಹನುಮಂತಾವಧೂತರ ಆರಾಧನಾ ಉತ್ಸವದಲ್ಲಿ ಸೋಮವಾರ ಬೆಳಗಿನ ಜಾವ ನಡೆದ ಮಡಿತೇರು (ಉಚ್ಚಾಯ) ಎಳೆಯುವ ಸಂದರ್ಭದಲ್ಲಿ ತೇರಿನ ಒಂದು ಭಾಗ ಮುರಿದು ವಾಲಿದ್ದರಿಂದ ಐವರು ಗಾಯಗೊಂಡು, ಒಬ್ಬನ ಸ್ಥಿತಿ ಗಂಭೀರವಾಗಿದೆ.
ಗ್ರಾಮದ ರಾಘವೇಂದ್ರರೆಡ್ಡಿ, ಗುಂಡಪ್ಪಸ್ವಾಮಿ, ಲಕ್ಷೀಕಾಂತರೆಡ್ಡಿ, ತಿಕ್ಕಯ್ಯ, ತಾಯಪ್ಪ ಗಾಯಗೊಂಡವರು. ಅವರನ್ನು ಸಿರುಗುಪ್ಪದಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಮಹೇಶ ಎಂಬುವವರನ್ನು ಬಳ್ಳಾರಿಯ ವಿಮ್ಸ್ಗೆ ದಾಖಲಿಸಲಾಗಿದೆ.
‘ಸರ್ಕಾರದ ಆದೇಶ ಉಲ್ಲಂಘಿಸಿ ತೇರು ಎಳೆದಿದ್ದರಿಂದ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಲು ಹಚ್ಚೊಳ್ಳಿ ಪಿಎಸ್ಐಗೆ ಸೂಚಿಸಲಾಗಿದೆ’ ಎಂದು ಸಿರುಗುಪ್ಪ ಸಿಪಿಐ ಟಿ.ಆರ್.ಪವಾರ್ ತಿಳಿಸಿದ್ದಾರೆ.