ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧ

ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಣೆ
Last Updated 13 ಜೂನ್ 2019, 12:51 IST
ಅಕ್ಷರ ಗಾತ್ರ

ಹೊಸಪೇಟೆ: ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ನಗರದಲ್ಲಿ ಗುರುವಾರ ಆಚರಿಸಲಾಯಿತು.

ನಗರದ ನಗರೇಶ್ವರ ದೇವಸ್ಥಾನದಿಂದ ಪ್ರಮುಖ ಮಾರ್ಗಗಳ ಮೂಲಕ ಚಿತ್ತವಾಡ್ಗಿಯ ಒಳಾಂಗಣ ಕ್ರೀಡಾಂಗಣದ ವರೆಗೆ ಜಾಥಾ ನಡೆಸಲಾಯಿತು. ಜಾಥಾದುದ್ದಕ್ಕೂ ಬಾಲ ಕಾರ್ಮಿಕ ಪದ್ಧತಿ ಕುರಿತು ಅರಿವು ಮೂಡಿಸಲಾಯಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದವಕೀಲ ಎ.ಕರುಣಾನಿಧಿ, ’ಮಕ್ಕಳನ್ನು ದುಡಿಯಲು ಕಳುಹಿಸುವುದು ಮತ್ತು ಅವರನ್ನು ದುಡಿಸಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧ. ಎಳೆ‌ವಯಸ್ಸಿನ ಕಂದಮ್ಮಗಳಿಗೆ ಕೆಲಸಕ್ಕೆ‌ ಹಚ್ಚಿದರೆ ಅವರ ಜ್ಞಾನಾರ್ಜನೆಗೆ, ಬುದ್ಧಿ ವಿಕಾಸಕ್ಕೆ ತೊಡಕಾಗುತ್ತದೆ. ಒಟ್ಟಾರೆ ಅವರ ಬೆಳವಣಿಗೆ ಕುಂಠಿತಗೊಳ್ಳುತ್ತದೆ‘ ಎಂದು ಹೇಳಿದರು.

’ಕೈಗಾರಿಕೆ ಕ್ರಾಂತಿಯ ನಂತರ ಬಾಲ ಕಾರ್ಮಿಕ ಪದ್ಧತಿ ಆಚರಣೆಗೆ ಬಂತು. ಮಕ್ಕಳ ಶೈಕ್ಷಣಿಕ ಹಕ್ಕು, ಬಾಲ್ಯದ ಕನಸು ಕಸಿದುಕೊಳ್ಳುತ್ತದೆ ಎಂಬ ಕಾರಣಕ್ಕಾಗಿ ಕಾನೂನು ತರಲಾಗಿದೆ. ಆದರೆ, ಸಂಪೂರ್ಣವಾಗಿ ಬಾಲಕಾರ್ಮಿಕ ಪದ್ಧತಿ ನಿಂತಿಲ್ಲ‘ ಎಂದು ತಿಳಿಸಿದರು.

’ವಯಸ್ಕರಿಗೆ ಹೆಚ್ಚು ಕೂಲಿ ಕೊಡಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಮಕ್ಕಳನ್ನು ದುಡಿಸಿಕೊಳ್ಳುವ ಪ್ರವೃತ್ತಿ ಇದೆ. ಎಲ್ಲ ದೇಶಗಳಲ್ಲೂ ಈ ಪಿಡುಗು ಇದೆ. ಇದರ ವಿರುದ್ಧ ಕಾರ್ಮಿಕರು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿದರು. ಅದರ ಪರಿಣಾಮವಾಗಿ ಕಾನೂನು ಜಾರಿಗೆ ಬಂದಿದೆ.ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ಯಾರೇ ದುಡಿಸಿಕೊಂಡರೆ ಅದು ಅಪರಾಧ‘ ಎಂದರು.

’ಮಕ್ಕಳನ್ನು ದುಡಿಸಿಕೊಂಡಿರುವುದು ಸಾಬೀತಾದರೆ ಇಪ್ಪತ್ತು ಸಾವಿರ ದಂಡ, ಎರಡು ವರ್ಷ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಲು ಅವಕಾಶವಿಲ್ಲ. ಕಡ್ಡಾಯ ಶಿಕ್ಷಣ ಹಕ್ಕು ಜಾರಿಗೆ ತಂದು, ಅದನ್ನು ಯಾರೂ ಉಲ್ಲಂಘಿಸುವಂತಿಲ್ಲ ಎಂಬ ಕಠಿಣವಾದ ನಿಯಮ ಜಾರಿಗೆ ತರಲಾಗಿದೆ‘ ಎಂದು ಮಾಹಿತಿ ನೀಡಿದರು.

’ಖಾಸಗಿ ಉದ್ಯಮಿಗಳಿಗೆ ಲಾಭವೇ ಮುಖ್ಯ. ಹಾಗಾಗಿ ಅವರು ಮಹಿಳೆಯರು, ಮಕ್ಕಳನ್ನು ಕಾನೂನಿಗೆ ವಿರುದ್ಧವಾಗಿ ಮನಬಂದಂತೆ ದುಡಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಸಂಪೂರ್ಣ ಕಡಿವಾಣ ಬೀಳುವ ಅಗತ್ಯವಿದೆ‘ ಎಂದು ಪ್ರತಿಪಾದಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ ಮಾತನಾಡಿ, ’ಯಾರು ಕೂಡ ಮಕ್ಕಳನ್ನು ಕೆಲಸಕ್ಕೆ ಕಳುಹಿಸಬಾರದು. ಅದು ಅವರ ವಿಕಾಸಕ್ಕೆ ಅಡ್ಡಿಯಾಗುತ್ತದೆ‘ ಎಂದರು.

ಕಾರ್ಮಿಕ ಇಲಾಖೆ ಅಧಿಕಾರಿ ಆರ್. ಭೂಪಾಲ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜೋಷಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಎಸ್. ರೇವಣಸಿದ್ದಪ್ಪ, ಕಾರ್ಮಿಕ ಇಲಾಖೆಯ ಅಧಿಕಾರಿ ಪರಶುರಾಮ, ಚೈಲ್ಡ್ ಲೈನ್ ಸಂಸ್ಥೆಯ ಸಂಯೋಜಕ ಚಿದಾನಂದ, ಸಮಾಜ ಸೇವಕ ಮೊಹಮ್ಮದ್ ಇಮಾಮ್ ನಿಯಾಜಿ ಇದ್ದರು. ವಿವಿಧ ಶಾಲೆಗಳ ನೂರಾರು ಮಕ್ಕಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT