ಹೂವಿನಹಡಗಲಿ: ರೈತರ ಜಮೀನುಗಳಿಗೆ ಭೂ ಪರಿಹಾರ ನೀಡಲು ವಿಳಂಬ ನೀತಿ ಅನುಸರಿಸಿದ ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ವಿಭಾಗೀಯ ಕಚೇರಿ ಮತ್ತು ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯನ್ನು ನ್ಯಾಯಾಲಯ ಆದೇಶದ ಮೇರೆಗೆ ಸೋಮವಾರ ಜಪ್ತಿ ಮಾಡಲಾಯಿತು.
ಕೆ.ಅಯ್ಯನಹಳ್ಳಿ ಕಂದಾಯ ಗ್ರಾಮಕ್ಕೆ ಸೇರಿದ ಜಮೀನುಗಳನ್ನು ನೀರಾವರಿ ಉದ್ದೇಶಕ್ಕಾಗಿ ದಶಕದ ಹಿಂದೆ ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು. ಆದರೆ ರೈತರಿಗೆ ಭೂ ಪರಿಹಾರ ನೀಡಿರಲಿಲ್ಲ. ಸರ್ಕಾರದ ವಿಳಂಬ ನೀತಿಯನ್ನು ಪ್ರಶ್ನಿಸಿ ರೈತರಾದ ಲಂಬಾಣಿ ವಾಲ್ಯಾನಾಯ್ಕ, ಅಂಗಡಿ ಅಮಿನಾಬೀ ಸೇರಿ 14 ಜನರು ನ್ಯಾಯಾಲಯ ಮೆಟ್ಟಿಲೇರಿ ಬಾಕಿ ಇರುವ ₹ 50 ಲಕ್ಷ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದರು. ಪರಿಹಾರ ನೀಡುವುದಾಗಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಕೆಲ ವರ್ಷಗಳಿಂದ ವಿಳಂಬ ಮಾಡುತ್ತಲೇ ಬಂದಿದ್ದರು.
ಇಲ್ಲಿನ ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಲಯವು ಭೂ ಪರಿಹಾರ ಬಾಕಿ ಉಳಿಸಿಕೊಂಡಿರುವ ಸಂಬಂಧಿತ ಕಚೇರಿಗಳ ಜಪ್ತಿಗೆ ವಾರಂಟ್ ಜಾರಿಗೊಳಿಸಿತ್ತು. ರೈತರ ಪರ ವಕೀಲರಾದ ರತ್ನಾಕರ, ಬಿ.ಶಿವಾನಂದ ಹಾಗೂ ನ್ಯಾಯಾಲಯದ ಸಿಬ್ಬಂದಿ ಕೆ.ವೀರೇಶ, ಗೂಳೆಪ್ಪ ಅವರು ಕಚೇರಿಗಳನ್ನು ಜಪ್ತಿ ಮಾಡಿದರು.
ಭೂ ಸ್ವಾಧೀನ ಕಚೇರಿಯಲ್ಲಿದ್ದ ಪೀಠೋಪಕರಣ, ಗಾಡ್ರೇಜ್ ಮತ್ತು ಸಿಂಗಟಾಲೂರು ಏತ ನೀರಾವರಿ ಯೋಜನೆ ವಿಭಾಗೀಯ ಕಚೇರಿಯ ಪೀಠೋಪಕರಣ, ಕಂಪ್ಯೂಟರ್, ಪ್ರಿಂಟರ್ ಗಳನ್ನು ಜಪ್ತಿ ಮಾಡಿ, ನ್ಯಾಯಾಲಯ ವಶಕ್ಕೆ ಒಪ್ಪಿಸಿದರು.