ಹೊಸಪೇಟೆ: ಭಜನಾ ತಂಡದ ಕಲಾವಿದರಿಗೆ ಮಾಸಾಶಾನ ನೀಡಬೇಕೆಂದು ಆಗ್ರಹಿಸಿ ಕಲಾವಿದರು ಬುಧವಾರ ನಗರದಲ್ಲಿ ಭಜನೆ ಮಾಡುತ್ತ ವಿನೂತನ ರೀತಿಯಲ್ಲಿ ಪ್ರತಿಭಟನಾ ರ್ಯಾಲಿ ಮಾಡಿದರು.
ಸಮುದಾಯ ಸಾಂಸ್ಕೃತಿಕ ಸಂಘಟನೆ, ತಾಲ್ಲೂಕು ಭಜನಾ ತಂಡಗಳ ಒಕ್ಕೂಟದಿಂದ ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇಗುಲದಿಂದ ಪ್ರಮುಖ ಮಾರ್ಗಗಳಲ್ಲಿ ರ್ಯಾಲಿ ನಡೆಸಿದರು. ನಂತರ ನಗರಸಭೆ ಪೌರಾಯುಕ್ತರು ಹಾಗೂ ಬಳಿಕ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಎಚ್. ವಿಶ್ವನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ರ್ಯಾಲಿಯುದ್ದಕ್ಕೂ ಹಾರ್ಮೋನಿಯಂ, ಚಲ್ಲಂ, ತಮಟೆ ಬಾರಿಸುತ್ತ ಹೆಜ್ಜೆ ಹಾಕಿದ್ದು ಎಲ್ಲರ ಗಮನ ಸೆಳೆಯಿತು.
‘ಭಜನಾ ತಂಡಗಳು ದೇಶದ ಶ್ರೀಮಂತ ಜನಪದ ಕಲೆಯನ್ನು ಉಳಿಸಿವೆ. ಆದರೆ, ಅವರು ಬಹಳ ಸಂಕಷ್ಟದಿಂದ ಬದುಕುತ್ತಿದ್ದಾರೆ. ಸರ್ಕಾರ ಎಲ್ಲ ಭಜನಾ ತಂಡದ ಸದಸ್ಯರನ್ನು ಕಲಾವಿದರೆಂದು ಪರಿಗಣಿಸಿ, ಮಾಸಾಶಾನ ನಿಗದಿಪಡಿಸಬೇಕು. ರಿಯಾಯಿತಿ ದರದಲ್ಲಿ ಭಜನಾ ಪರಿಕರಗಳನ್ನು ಸರ್ಕಾಋ ನೀಡಬೇಕು. ಪ್ರತಿ ವಾರ್ಡ್ಗಳಲ್ಲಿ ಸುಸಜ್ಜಿತ ಭಜನಾ ಭವನಗಳನ್ನು ನಿರ್ಮಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಜನಾ ತಂಡಗಳ ಸರ್ವೇ ನಡೆಸಿ, ಅವುಗಳ ಉದ್ಧಾರಕ್ಕೆ ಸಮಗ್ರ ಯೋಜನೆ ರೂಪಿಸಬೇಕು. ಪ್ರತಿ ವರ್ಷ ಭಜನಾ ಕಲಾವಿದರಿಗೆ ಕನಿಷ್ಠ ಹತ್ತು ದಿನ ತರಬೇತಿ ನೀಡುವುದು ಪ್ರಮುಖ ಬೇಡಿಕೆಗಳಾಗಿವೆ.
ಭಜನಾ ತಂಡದ ಮುಖ್ಯಸ್ಥ ಎಚ್. ಶಾಂತಪ್ಪ,ಮುಖಂಡರಾದ ತಾಯಪ್ಪ ನಾಯಕ, ಮರಡಿ ಜಂಬಯ್ಯ ನಾಯಕ, ಕೆ.ಎಂ. ಗೀತಾ, ಸೌಭಾಗ್ಯಲಕ್ಷ್ಮಿ, ಎ. ಕರುಣಾನಿಧಿ, ಕೆ. ರಮೇಶ, ಎಂ. ಉಮಾಮಹೇಶ್ವರ, ತಾರಿಹಳ್ಳಿ ಲಕ್ಷ್ಮಣ, ಎಂ. ದುರುಗೇಶ್, ವಿ. ಸ್ವಾಮಿ ಹಾಗೂ ವಿವಿಧ ಭಾಗದ ಭಜನಾ ಕಲಾವಿದರು ಇದ್ದರು.