ಬೆಂಗಳೂರು: ‘ಬಸವ ತತ್ವಗಳನ್ನು ಅನುಸರಿಸುವವರು ಲಿಂಗಾಯತರಾಗಿದ್ದಾರೆ. ಲಿಂಗಾಯತಕ್ಕೆ ಸ್ವತಂತ್ರ ಧರ್ಮ ನೀಡುವುದು ಎಂದರೆ ಅದು ಕನ್ನಡಿಗರ ಸಬಲೀಕರಣ ಎಂದರ್ಥ’ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.
ಸಮಕಾಲೀನ ವಿಚಾರ ವೇದಿಕೆಯು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಲಿಂಗಾಯತ ಪ್ರತ್ಯೇಕ ಧರ್ಮ’ ಕುರಿತ ಸಂವಾದದಲ್ಲಿ ಮಾತನಾಡಿದರು.
ಲಿಂಗಾಯತ ಸಮಾಜವು ದಕ್ಷಿಣ ಭಾರತದಲ್ಲೇ ಬಲಾಢ್ಯವಾಗಿದ್ದು, ಐತಿಹಾಸಿಕವಾಗಿ ನಿರ್ಣಾಯಕ ಪಾತ್ರ ವಹಿಸಲಿದೆ. ಪ್ರತ್ಯೇಕ ಧರ್ಮದ ಹೋರಾಟವು ಸಣ್ಣ ಪ್ರಮಾಣದಲ್ಲಿ ಶುರುವಾಗಿ ಗೋಕಾಕ್ ಚಳವಳಿ ಮಾದರಿಯಲ್ಲಿ ಬೆಳೆದುನಿಂತಿದೆ ಎಂದರು.
ವೈದಿಕ ಪರಂಪರೆಯು ವೇದ–ಆಗಮದ ಮೂಲಗಳಿಂದ ಬಂದಿದೆ. ಇದರ ಮುಂದುವರಿದ ಭಾಗವೇ ವೀರಶೈವ ಎಂದು ಅಭಿಪ್ರಾಯಪಟ್ಟರು.
ಸಿಪಿಐ(ಎಂ) ಮುಖಂಡ ಜಿ.ಎನ್.ನಾಗರಾಜ್, ‘ವೇದ ಹಾಗೂ ವರ್ಣಾಶ್ರಮ ನಿಷ್ಠೆ, ಸಂಸ್ಕೃತವೇ ದೈವ ಭಾಷೆ ಎನ್ನುವುದರಿಂದ ಹೊರಬರುವುದರಲ್ಲೇ ಸ್ವತಂತ್ರ ಧರ್ಮದ ಅಸ್ತಿತ್ವ ಅಡಗಿದೆ. ಇಂತಹ ಎಲ್ಲ ಮಾನದಂಡಗಳನ್ನು ಹೊಂದಿರುವ ಲಿಂಗಾಯತ ಸಮುದಾಯಕ್ಕೆ ಮಾತ್ರ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲು ಸಾಧ್ಯ’ ಎಂದು ಹೇಳಿದರು.