ಹೊಸಪೇಟೆ(ವಿಜಯನಗರ): ‘ಪ್ರಾಮಾಣಿಕವಾಗಿ ವಾಣಿಜ್ಯ ತೆರಿಗೆ ಭರಿಸುವವರು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಬಗ್ಗೆ ಅನಗತ್ಯ ಭಯ ಪಡುವುದು ಬೇಡ’ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಬಿ.ವಿ.ಮುರಳಿಕೃಷ್ಣ ತಿಳಿಸಿದರು.
ವಾಣಿಜ್ಯ ತೆರಿಗೆ ಇಲಾಖೆ, ವಿಜಯನಗರ ಜಿಲ್ಲೆ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಸಹಭಾಗಿತ್ವದಲ್ಲಿ ಗುರುವಾರ ನಗರದಲ್ಲಿ ಏರ್ಪಡಿಸಿದ್ದ ಜಿಎಸ್ಟಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ತೆರಿಗೆ ವಂಚನೆ ಮಾಡುವವರಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ಜಿಎಸ್ಟಿ ಜೊತೆಗೆ ಇ–ವೇ ಬಿಲ್, ಇ–ಇನ್ವೈಸ್ ಜಾರಿಗೆ ತಂದಿದೆ. ವರ್ತಕರು, ಉದ್ಯಮಿಗಳು ವ್ಯವಹಾರದ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಎಲ್ಲವೂ ಪಾರದರ್ಶಕವಾಗಿ ಮಾಡಿದರೆ ಜಿಎಸ್ಟಿಯಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ’ ಎಂದು ಹೇಳಿದರು.
‘ತೆರಿಗೆ ವಂಚಕರಿಗೆ ಕಡಿವಾಣ ಹಾಕಲು ಭವಿಷ್ಯದ ದಿನಗಳಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ಇನ್ನಷ್ಟು ಬದಲಾವಣೆಗಳು ಆಗಬಹುದು. ಕಾಲಕಾಲಕ್ಕೆ ಆಗುವ ಬದಲಾವಣೆ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡಿರಬೇಕು. ತಂತ್ರಜ್ಞಾನದ ಬಳಕೆಯೂ ಗೊತ್ತಿರಬೇಕು. ಇ-ಇನ್ವೈಸಿಂಗ್ ವಿಶ್ವಕ್ಕೆ ಮಾದರಿಯಾಗಿದೆ’ ಎಂದರು.
ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ವಿಶ್ವನಾಥ್, ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಅಶ್ವಿನ್ ಕೋತಂಬ್ರಿ, ಪ್ರಧಾನ ಕಾರ್ಯದರ್ಶಿ ಕಾಕುಬಾಳ ರಾಜೇಂದ್ರ, ಕೋಶಾಧ್ಯಕ್ಷ ವಿಜಯ ಸಿಂಧಗಿ, ಟ್ಯಾಲಿ ಸಲ್ಯೂಶನ್ಸ್ನ ಎಜಿಎಮ್ ಸಿ.ಜಿ. ಷಣ್ಮುಖ ಇದ್ದರು.