ಹೊಸಪೇಟೆ: ತಾಲ್ಲೂಕಿನ ಮರಿಯಮ್ಮನಹಳ್ಳಿ ಬಳಿ ಸಂಭವಿಸಿದ ಅಪಘಾತಕ್ಕೆ ಅತಿ ವೇಗದಲ್ಲಿ ಕಾರು ಓಡಿಸಿದ್ದೆ ಪ್ರಮುಖ ಕಾರಣ ಎಂಬುದು ರಾಷ್ಟ್ರೀಯ ಹೆದ್ದಾರಿ 50ರ ಬಳಿಯ ಡಾಬಾದ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳಿಂದ ತಿಳಿದು ಬಂದಿದೆ.
ಫೆಬ್ರುವರಿ 10ರಂದು ಮಧ್ಯಾಹ್ನ 3.15ಕ್ಕೆ ಕೆಂಪು ಬಣ್ಣದ ಬೆಂಜ್ ಕಾರು ರಾಷ್ಟ್ರೀಯ ಹೆದ್ದಾರಿ 50ರ ಮೂಲಕ ನಗರದಿಂದ ಬೆಂಗಳೂರಿಗೆ ಹೊರಟಿತ್ತು. ಈ ಕಾರು ಗಂಟೆಗೆ ಸುಮಾರು 120ರಿಂದ 130 ಕಿ.ಮೀ ವೇಗದಲ್ಲಿ ಹೋಗುತ್ತಿತ್ತು ಎನ್ನಲಾಗಿದೆ.
ಸಿಸಿಟಿವಿ ವ್ಯಾಪ್ತಿಯಲ್ಲಿ ಹೆದ್ದಾರಿ ಮೂಲಕ ಕಾರು ಕ್ಷಣಾರ್ಧದಲ್ಲಿ ಹಾದು ಹೋಗಿರುವ ದೃಶ್ಯವಷ್ಟೇ ದಾಖಲಾಗಿದೆ. ಅದಾದ ಕೆಲ ನಿಮಿಷಗಳ ಬಳಿಕ ಕಾರಿನಲ್ಲಿ ಗಾಯಗೊಂಡವರು ಜೀಪಿನಲ್ಲಿ ನಗರದ ಕಡೆಗೆ ಹೋಗುತ್ತಿರುವ ದೃಶ್ಯವೂ ಸೆರೆಯಾಗಿದೆ.
ವೇಗದಿಂದ ಬಂದ ಕಾರು, ಹೆದ್ದಾರಿ ಬದಿಯ ಚಹಾದಂಗಡಿ ಬಳಿ ನಿಂತಿದ್ದ ಮರಿಯಮ್ಮನಹಳ್ಳಿ ತಾಂಡಾದ ರವಿ ನಾಯ್ಕಗೆ (16) ಡಿಕ್ಕಿ ಹೊಡೆದಿದೆ. ರವಿ ಸ್ಥಳದಲ್ಲೇ ಮೃತಪಟ್ಟರೆ, ಕಾರಿನಲ್ಲಿದ್ದ ಸಚಿನ್ (27) ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದರು.
ಕಾರು ಚಾಲಕ ರಾಹುಲ್, ಕಾರಿನಲ್ಲಿದ್ದ ರಾಕೇಶ್, ಶಿವಕುಮಾರ ಹಾಗೂ ವರುಣ್ಗೆ ಗಾಯಗಳಾಗಿದ್ದವು. ರಾಹುಲ್ನನ್ನು ಇತ್ತೀಚೆಗೆ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ರಾಜ್ಯದ ಪ್ರಭಾವಿ ಸಚಿವರ ಮಗನೇ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾಗಿದ್ದಾನೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ.