ಹೊಸಪೇಟೆ: ವಸತಿ ನಿಲಯದ ಪಾಲಕರು ಹಾಗೂ ಅಡುಗೆ ಕೋಣೆಯ ಸಿಬ್ಬಂದಿಯನ್ನು ಬದಲಿಸುವಂತೆ ಆಗ್ರಹಿಸಿ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ಅಸ್ಮಿತಾ’ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು ಶುಕ್ರವಾರ ವಿ.ವಿ.ಯಲ್ಲಿ ಪ್ರತಿಭಟನೆ ನಡೆಸಿದರು.
ನಂತರ ಕುಲಸಚಿವರಿಗೆ ಮನವಿ ಪತ್ರ ಸಲ್ಲಿಸಿದರು. ‘ವಿದ್ಯಾರ್ಥಿ ನಿಲಯದಲ್ಲಿ ಪೂರ್ಣ ಪ್ರಮಾಣದ ನಿಲಯ ಪಾಲಕರನ್ನು ನೇಮಿಸಬೇಕು. ಈಗಿರುವ ಅಡುಗೆ ಕೋಣೆಯ ಎಲ್ಲ ಸಿಬ್ಬಂದಿಯನ್ನು ತೆಗೆದು ಅವರ ಜಾಗಕ್ಕೆ ಕಾಳಜಿ ಇರುವ, ಉತ್ತಮವಾಗಿ ಕೆಲಸ ನಿರ್ವಹಿಸುವವರನ್ನು ನೇಮಕ ಮಾಡಬೇಕು’ ಎಂದು ಆಗ್ರಹಿಸಿದರು.
‘ವಿದ್ಯಾರ್ಥಿ ನಿಲಯ ಅವ್ಯವಸ್ಥೆಯ ಗೂಡಾಗಿದೆ. ಕನಿಷ್ಠ ಸೌಕರ್ಯಗಳು ಇಲ್ಲ. ಈ ಕಾರಣಕ್ಕಾಗಿಯೇ ಇತ್ತೀಚೆಗೆ ವಿದ್ಯಾರ್ಥಿನಿಯರು ವಿಷಾಹಾರ ಸೇವಿಸಿ ವಾಂತಿ, ಭೇದಿ ಮಾಡಿಕೊಂಡು ಅಸ್ವಸ್ಥರಾಗಿದ್ದರು. ಅಗತ್ಯ ಸೌಕರ್ಯ ಕಲ್ಪಿಸಬೇಕು. ಗುಣಮಟ್ಟದ ಆಹಾರ ಪೂರೈಸಬೇಕು’ ಎಂದು ಒತ್ತಾಯಿಸಿದರು.