ಕೊಟ್ಟೂರು: ಹಂಪಿ ಹೊರನೋಡು, ಉಜ್ಜಿನಿ ಒಳನೋಡು... ಇದು ಗ್ರಾಮೀಣ ಭಾಗಗಳಲ್ಲಿ ಚಾಲ್ತಿಯಲ್ಲಿರುವ ಮಾತು. ಹಂಪಿ ಸ್ಮಾರಕಗಳು, ಅದರ ವಾಸ್ತುಶಿಲ್ಪವನ್ನು ಹೊರಗಿನಿಂದ ಕಣ್ತುಂಬಿಕೊಂಡರೆ, ಉಜ್ಜಿನಿ ಒಳ ಹೊರಗನ್ನು ನೋಡಿಕೊಂಡು ಹೋದರಷ್ಟೇ ಪ್ರವಾಸ ಪೂರ್ಣ ಎನ್ನುವುದು ಈ ಮಾತಿನ ಅರ್ಥ.
ಪಂಚ ಪೀಠಗಳಲ್ಲಿ ಒಂದಾಗಿರುವ ತಾಲ್ಲೂಕಿನ ಉಜ್ಜಿನಿಯ ಸದ್ಧರ್ಮ ಪೀಠವು ಭಕ್ತರಿಗೆ ಧಾರ್ಮಿಕ ಶ್ರದ್ಧಾ ಕೇಂದ್ರವಾದರೆ, ಪ್ರವಾಸಿಗರಿಗೆ ಪ್ರವಾಸಿ ತಾಣವಾಗಿದೆ.
ಉಜ್ಜಿನಿ ಮರುಳಸಿದ್ದೇಶ್ವರ ದೇವಾಲಯ ಪೌರಾಣಿಕ, ಐತಿಹಾಸಿಕ, ಧಾರ್ಮಿಕ ಕಾರಣಗಳಿಂದ ಮಹತ್ವ ಪಡೆದಿದೆ. ಉತ್ಕೃಷ್ಟ ಶಿಲ್ಪಕಲೆಯಿಂದ ಜನರನ್ನು ಆಕರ್ಷಿಸುತ್ತಿದೆ. ಇದರ ಬಗ್ಗೆ ಹಲವು ಸಂಶೋಧನಗೆಳು ನಡೆದಿವೆ. ಪೀಠದ ಸಂಶೋಧನೆಯಲ್ಲಿ ತೊಡಗುವವರಿಗೆ ಎಲ್ಲ ರೀತಿಯ ನೆರವು ನೀಡಲಾಗುತ್ತದೆ.
ಪ್ರತಿವರ್ಷ ಇಡೀ ಗೋಪುರಕ್ಕೆ ತೈಲಾಭಿಷೇಕ ಮಾಡುವುದು ವಿಶೇಷ. ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಬರುತ್ತಾರೆ. ಶಿಖರದ ತೈಲಾಭಿಷೇಕ ದಕ್ಷಿಣ ಭಾರತದಲ್ಲಿಯೇ ವಿಶಿಷ್ಟ ಆಚರಣೆಯಾಗಿದೆ. ಇದರೊಂದಿಗೆ ಕೊಟ್ಟೂರಿನ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ ಸೌಹಾರ್ದತೆಯ ಸಂಕೇತ. ಎಲ್ಲ ಜಾತಿ, ಜನಾಂಗದವರ ಆರಾಧ್ಯದೈವ. ಪ್ರತಿವರ್ಷ ನಡೆಯುವ ಜಾತ್ರೆಯಲ್ಲಿ ಸಹಸ್ರಾರು ಜನ ಭಾಗವಹಿಸುತ್ತಾರೆ.