ಕಂಪ್ಲಿ (ಬಳ್ಳಾರಿ ಜಿಲ್ಲೆ): ತಾಲ್ಲೂಕಿನ ಸುಗ್ಗೇನಹಳ್ಳಿ– ಶ್ರೀರಾಮರಂಗಾಪುರ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ಚಿರತೆ ಹಾಗೂ ಅದರ ಮರಿಯೊಂದು ಕಾಣಿಸಿಕೊಂಡಿದ್ದು, ಆ ಮಾರ್ಗದಲ್ಲಿ ಹೊರಟಿದ್ದ ಬೈಕ್ ಒಂದನ್ನು ಬೆನ್ನಟ್ಟಿ ಹೋಗಿವೆ.
ಹಿಂಬಾಲಿಸುತ್ತಿದ್ದ ಚಿರತೆಯನ್ನು ಕಂಡು, ಬೈಕ್ ಸವಾರ ವಾಹನವನ್ನು ಜೋರಾಗಿ ಓಡಿಸಿದ್ದಾರೆ. ಇದರಿಂದಾಗಿ ಅವರು ಹಾಗೂ ಅವರೊಂದಿಗಿದ್ದ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇವರಿಬ್ಬರೂ, ದಾರಿ ಮಧ್ಯದಲ್ಲಿ, ಮೂತ್ರವಿಸರ್ಜನೆಗೆಂದು ಹೊಲವೊಂದರ ಬಳಿ ತೆರಳಿದ್ದರು. ಆಗ ಚಿರತೆಗಳು ದಿಢೀರನೇ ಪ್ರತ್ಯಕ್ಷವಾಗಿವೆ. ಕೂಡಲೇ ಅವರು ಬೈಕ್ ಹತ್ತಿ ಅಲ್ಲಿಂದ ಹೊರಟಿದ್ದಾರೆ. ಆದರೂ ಒಂದು ಚಿರತೆ ಸುಮಾರು 80 ಮೀಟರ್ನಷ್ಟು ದೂರ ಬೆನ್ನಟ್ಟಿಕೊಂಡು ಬಂದಿತ್ತು ಎಂದು ತಿಳಿದುಬಂದಿದೆ.