ಹೊಸಪೇಟೆ: ‘ರಾಜ್ಯ ಸರ್ಕಾರವು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ, ಅದಕ್ಕೆ ₹500 ಕೊಟಿ ಮೀಸಲಿಟ್ಟಿರುವುದು ಸ್ವಾಗತಾರ್ಹ’ ಎಂದು ಅಖಿಲ ಭಾರತ ವೀರಶೈವ ಮಹಾಸಭೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
‘ವೀರಶೈವ ಲಿಂಗಾಯತ ಧರ್ಮವು ಶತಮಾನಗಳ ಇತಿಹಾಸ ಹೊಂದಿದೆ. ಕಾಯಕ–ದಾಸೋಹದಂತಹ ಪರಿಕಲ್ಪನೆಗಳನ್ನು ಮನುಷ್ಯಕುಲಕ್ಕೆ ಕೊಟ್ಟಿದೆ. ರಾಜ್ಯ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ವೀರಶೈವ–ಲಿಂಗಾಯತರಿದ್ದಾರೆ. ಈಗಲೂ ಈ ಧರ್ಮದಲ್ಲಿ ಅನೇಕ ಬಡವರಿದ್ದಾರೆ. ನಿಗಮ ಸ್ಥಾಪನೆಯಿಂದ ಬಡವರ ಉದ್ಧಾರ ಸಾಧ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ನಿಗಮ ಸ್ಥಾಪಿಸಬೇಕು ಎನ್ನುವುದು ಬಹುವರ್ಷಗಳ ಬೇಡಿಕೆಯಾಗಿತ್ತು. ಅದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅಭಿನಂದನಾರ್ಹರು’ ಎಂದು ತಿಳಿಸಿದ್ದಾರೆ.