ಬಳ್ಳಾರಿ: 'ಲೋಕಸಭೆ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಬಳ್ಳಾರಿಯ ಭಾಗ್ಯ' ಇದ್ದಂತೆ. ಹಿಂದುಳಿದ ವರ್ಗದ 4.61ಲಕ್ಷ ಮತಗಳು ಕಾಂಗ್ರೆಸ್ ಪರವಾಗಿವೆ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಹೇಳಿದರು.
2019ರ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಉಪಚುನಾವಣೆಯನ್ನು ಎದುರಿಸುತ್ತಿದ್ದೇವೆ. ಹಿಂದುಳಿದ ವರ್ಗದಲ್ಲಿ 103 ಉಪಜಾತಿಗಳಿದ್ದು, ಎಲ್ಲ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
15 ವರ್ಷದಿಂದ ಜಿಲ್ಲೆಯ ಜನರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. 3 ಬಾರಿ ಬಿಜೆಪಿಗೆ ಮತ ನೀಡಿ ಜನ ಬೇಸತ್ತಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವುದು ಖಚಿತ ಎಂದು ತಿಳಿಸಿದರು.
ಸಮ್ಮಿಶ್ರ ಸರ್ಕಾರ ಹಿಂದುಳಿದವರ ಪರವಾಗಿದೆ. ಬಿಜೆಪಿ ಸಂಸದರಿದ್ದಾಗ ಕೇಂದ್ರದಿಂದ ಜಿಲ್ಲೆಗೆ ಯಾವುದೇ ಅನುದಾನ ತಂದಿಲ್ಲ. ಕಾಂಗ್ರೆಸ್ ಗೆದ್ದರೆ ರಾಜ್ಯ ಸರ್ಕಾರದಿಂದ ಅನುದಾನ ಬರಲಿದೆ. ಬಿಜೆಪಿಯವರು ಜಿಲ್ಲೆಯನ್ನು ಕಡೆಗಣಿಸಿದ್ದಾರೆ. ಸೋನಿಯಾ ಇಲ್ಲಿ ಬಂದು ಗೆದ್ದಿದ್ದರಿಂದ ಜಿಲ್ಲೆಗೆ ಹಲವು ಯೋಜನೆಗಳು ಬಂದು ಅಭಿವೃದ್ಧಿಯಾಗಿದೆ ಎಂದರು.
ಮುಖಂಡರಾದ ದೇವೇಂದ್ರಪ್ಪ, ತಮ್ಮಯ್ಯ,ಜಿ.ಕೃಷ್ಣ, ಕಲ್ಲುಕಂಬ ಪಂಪಾಪತಿ ಇದ್ದರು.