ಹೊಸಪೇಟೆ: ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ (ಎಐಡಿವೈಒ) ವತಿಯಿಂದ ಶನಿವಾರ ನಗರದಲ್ಲಿ ಏಕಕಾಲಕ್ಕೆ ಹಲವು ಕಡೆ ನೇತಾಜಿ ಸುಭಾಷಚಂದ್ರ ಬೋಸ್ ಅವರ 125ನೇ ಜನ್ಮ ದಿನ ಆಚರಿಸಲಾಯಿತು.
ನಗರದ ಬಾಸ್ಕೆಟ್ಬಾಲ್ ಕ್ರೀಡಾಂಗಣ, ಮುನ್ಸಿಪಲ್ ಕಾಲೇಜು ಮೈದಾನ, ಟಿಎಂಎಇ ಐಟಿಐ ಕಾಲೇಜು ಹಾಗೂ ತಾಲ್ಲೂಕಿನ ಬಸವನದುರ್ಗಾ ಗ್ರಾಮದಲ್ಲಿ ನೇತಾಜಿಯವರ ಭಾವಚಿತ್ರಕ್ಕೆ ಹೂಮಳೆಗರೆದು ಗೌರವ ಸಲ್ಲಿಸಲಾಯಿತು.
ಮುನ್ಸಿಪಲ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಮಲ್ಲಿಕಾರ್ಜುನ ಕೆಂಚರೆಡ್ಡಿ, ‘ಉತ್ತಮ ಸಮಾಜಕ್ಕಾಗಿ ಕೆಲಸ ಮಾಡುವುದು ಎಲ್ಲರ ಜವಾಬ್ದಾರಿ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ವಿಚಾರಗಳ ಆಧಾರದ ಮೇಲೆ ಸಮಾಜ ಬದಲಾವಣೆಯ ಕೆಲಸಗಳು ನಡೆಯಬೇಕಿದೆ’ ಎಂದು ಹೇಳಿದರು.
ಎಐಡಿಎಸ್ಒ ಅಖಿಲ ಭಾರತ ಉಪಾಧ್ಯಕ್ಷ ಡಾ. ಪ್ರಮೋದ್ ಮಾತನಾಡಿ, ‘ದೆಹಲಿ ಗಡಿಗಳಲ್ಲಿ ಸುಮಾರು ಎರಡು ತಿಂಗಳಿಂದ ಯಾವುದೇ ರಾಜಿ ಇಲ್ಲದೇ ರೈತರು ಹೋರಾಟ ನಡೆಸುತ್ತಿದ್ದಾರೆ. ಅವರು ನೇತಾಜಿಯವರ ಉತ್ತರಾಧಿಕಾರಿಗಳು. ಏಕೆಂದರೆ ನೇತಾಜಿಯವರು ಜೀವನದುದ್ದಕ್ಕೂ ರಾಜಿ ರಹಿತ ಹೋರಾಟ ಮಾಡಿದ್ದರು. ಬ್ರಿಟಿಷರು ಅವರಿಗೆ ಬಹಳ ಹೆದರುತ್ತಿದ್ದರು’ ಎಂದರು.
‘ದೇಶದಲ್ಲಿ ನಿರುದ್ಯೋಗ, ಆಹಾರದ ಕೊರತೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಆರ್ಥಿಕ ಮಟ್ಟ ಕುಸಿದಿದೆ. ಅನೇಕ ಜ್ವಲಂತ ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ಆದರೆ, ಅವುಗಳನ್ನು ಮರೆಮಾಚಿ ಕೋಮುದ್ವೇಷ ಬಿತ್ತಲಾಗುತ್ತಿದೆ. ಅದಕ್ಕೆ ಜನ ಬಲಿಯಾಗಬಾರದು’ ಎಂದು ಹೇಳಿದರು.
ಎಐಡಿವೈಒ ಜಿಲ್ಲಾ ಉಪಾಧ್ಯಕ್ಷ ಎಚ್. ಯರ್ರಿಸ್ವಾಮಿ, ಕಲ್ಮೇಶ್ ಗುದಿಗೇನವರ್, ಹುಲುಗಪ್ಪ, ಬಾಷಾ ಬೆನಕಾಪುರ, ಪ್ರಕಾಶ್ ನಾಯಕ ಇದ್ದರು.