ಸಂಡೂರು: ‘ದೇಶದ ಸಂಪತ್ತನ್ನು ಲೂಟಿ ಮಾಡುತ್ತಿರುವ ಕಾರ್ಪೊರೇಟ್ ಕಂಪನಿಗಳು ದೇಶ ಬಿಟ್ಟು ತೊಲಗಲಿ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಕಾರ್ಮಿಕರ, ರೈತರ ಹಾಗೂ ಕೃಷಿ ಕೂಲಿಕಾರರ ಸಂಘಟನೆಗಳ ಮುಖಂಡರು ಸಂಡೂರಿನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ತಮ್ಮ ಮನವಿ ಪತ್ರವನ್ನು ತಹಶೀಲ್ದಾರ್ ಎಚ್.ಜೆ. ರಶ್ಮಿಯವರ ಮೂಲಕ ಪ್ರಧಾನಮಂತ್ರಿಗೆ ರವಾನಿಸಿದರು.
ಸಿಐಟಿಯು ಸಂಚಾಲಕ ಜೆ.ಎಂ. ಚನ್ನಬಸಯ್ಯ ಮಾತನಾಡಿ, ‘ಕೇಂದ್ರ ಸರ್ಕಾರ ಅಂಗೀಕರಿಸಿರುವ ಮೂರು ಹೊಸ ಕೃಷಿ ಕಾನೂನುಗಳು ರೈತ ವಿರೋಧಿಯಾಗಿದ್ದು, ಅವುಗಳನ್ನು ಹಾಗೂ ವಿದ್ಯುತ್ ತಿದ್ದುಪಡಿ ಮಸೂದೆಗಳನು ರದ್ದುಪಡಿಸಬೇಕು, ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಯಾಗಿ ದೊರೆಯುವಂತೆ ಕಾಯ್ದೆ ಮಾಡಬೇಕು. ಜನ ವಿರೋಧಿ ತಿದ್ದುಪಡಿಗಳನ್ನು ಹಿಂಪಡೆಯಬೇಕು. ಉದ್ಯೋಗ ಖಾತ್ರಿ ಅನುದಾನವನ್ನು ಹೆಚ್ಚಿಸಿ, ದಿನಕ್ಕೆ ₹ 600 ರಂತೆ ಕನಿಷ್ಠ 200 ದಿನಗಳ ಕೆಲಸ ಖಾತರಿಪಡಿಸಬೇಕು. ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೆ ತಿಂಗಳಿಗೆ ₹ 10000 ನಗದು ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಟಿ.ಎಸ್. ಖಾಜಾಬನ್ನಿ, ಯು. ತಿಪ್ಪೇಸ್ವಾಮಿ, ವಿ. ದೇವಣ್ಣ, ಎ. ಸ್ವಾಮಿ, ಎಚ್. ದುರುಗಮ್ಮಾ, ಧನುಂಜಯ, ಎಸ್. ಕಾಲುಬ, ಎಚ್.ಎಂ. ರೇಖಾ ಇದ್ದರು.