ಬಳ್ಳಾರಿ: ದಿನ ಬಳಕೆ ವಸ್ತುಗಳು ಹಾಗೂ ಇಂಧನ ದರ ಏರಿಕೆ ವಿರುದ್ಧ ಜಿಲ್ಲೆಯಲ್ಲಿ ಮಾ.10ರಂದು ಪ್ರತಿಭಟನೆ ನಡೆಯಲಿದೆ. 19ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಸ್ಯುಸಿಐಸಿ ಪಕ್ಷದ ರಾಜ್ಯ ಸಮಿತಿ ಸದಸ್ಯ ಕೆ.ಸೋಮಶೇಖರ್ ತಿಳಿಸಿದರು.
'ಪಕ್ಷವು ದೇಶದಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಿದ್ದು, ಅದರ ಅಂಗವಾಗಿಯೇ ಜಿಲ್ಲೆಗಳಲ್ಲಿ ಪ್ರತಿಭಟನೆಯನ್ನು ಆಯೋಜಿಸಲಾಗುತ್ತಿದೆ' ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
'ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಬೇಕು. ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಬೇಕು. ಅಡುಗೆ ಅನಿಲದ ಸಬ್ಸಿಡಿಯನ್ನು ಮುಂದುವರಿಸಬೇಕು' ಎಂದು ಒತ್ತಾಯಿಸಿದರು.
'ಪಡಿತರ ಧಾನ್ಯಗಳ ಪ್ರಮಾಣವನ್ನು ಕಡಿಮೆ ಮಾಡಬಾರದು. ಅಂಗವಿಕಲರಿಗೆ, ವೃದ್ಧರಿಗೆ, ವಿಧವೆಯರಿಗೆ ಮಾಸಿಕ ಪಿಂಚಣಿ ನೀಡುವಲ್ಲಿ ತಡ ಮಾಡಬಾರದು' ಎಂದು ಒತ್ತಾಯಿಸಿದರು.
'ನಗರದಲ್ಲಿ ರಸ್ತೆ, ಒಳಚರಂಡಿ, ನೀರಿನ ಸಮಸ್ಯೆಗಳನ್ನು ಪರಿಹರಿಸಬೇಕು. ಜಿಲ್ಲಾ ಖನಿಜ ನಿಧಿಯನ್ನು ರಸ್ತೆ ನಿರ್ಮಾಣಕ್ಕಷ್ಟೇ ಸೀಮಿತಗೊಳಿಸಬಾರದು' ಎಂದು ಆಗ್ರಹಿಸಿದರು.
ಮುಖಂಡರಾದ ರಾಧಾಕೃಷ್ಣ ಉಪಾಧ್ಯ, ಎಂ.ಎನ್.ಮಂಜುಳಾ, ಡಿ.ನಾಗಲಕ್ಷ್ಮಿ, ಎ.ದೇವದಾಸ್, ಪ್ರಮೋದ್, ಎ.ಶಾಂತಾ, ಇ.ಹನುಮಂತಪ್ಪ ಇದ್ದರು.