ಕಮಲಾಪುರ: ತಾಲ್ಲೂಕಿನ ಕಮಲಪುರ ಸುತ್ತಲಿನ ತಾಂಡಾ ಹಾಗೂ ಗ್ರಾಮಗಳಿಂದ ಗುಳೆ ಹೋಗಿದ್ದ ಜನ ವಾಪಸ್ಸಾಗುತ್ತಿದ್ದು ಸೋಮವಾರ 122 ಜನ ಮರಳಿದ್ದಾರೆ.
ಮುಂಬಯಿ, ಪುಣೆ, ಬೆಂಗಳೂರು ಸೇರಿದಂತೆ ಹಲವು ಮಹಾನಗರಗಳಿಂದ ಸಾರಿಗೆ ಸಂಸ್ಥೆ ಬಸ್ನಲ್ಲಿ ಪ್ರಯಾಣ ಬೆಳೆಸಿದ ಇವರು ಬೆಳಿಗ್ಗೆ ಕಮಲಾಪುರ ಬಸ್ ನಿಲ್ದಾಣದಲ್ಲಿ ಬಂದಿಳಿದರು. ಕೆಲವರು ಮಹಾರಾಷ್ಟ್ರ ಗಡಿಯಿಂದ ನಡೆದುಕೊಂಡು ಬಂದಿದ್ದಾರೆ.
ಇವರೆಲ್ಲರನ್ನು ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಿ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಗಿದೆ. ಸಂಬಂಧಪಟ್ಟ ತಾಂಡಾ ಹಾಗೂ ಗ್ರಾಮಗಳ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪೊಲೀಸ್ ಠಾಣೆ, ಗ್ರಾಮ ಪಂಚಾಯಿತಿ ಪಿಡಿಒ ಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದು ತಹಶೀಲ್ದಾರ್ ಅಂಜುಮ್ ತಬಸುಮ್ ತಿಳಿಸಿದರು.
ಈಗಾಗಲೇ ಕಲಮೂಡದ ಹಾಗೂ ಕಮಲಾಪುರದಲ್ಲಿನ ಎರಡು ಸೇರಿ ಮೂರು ಕ್ವಾರಂಟೈನ್ ಕೇಂದ್ರಗಳು ಭರ್ತಿಯಾಗಿವೆ. ಅಂಬಲಗಾ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಶಾಸಕ: ಅಂಬಲಗಾ ಕ್ವಾರಂಟೈನ್ ಕೇಂದ್ರಕ್ಕೆ ಶಾಸಕ ಬಸವರಾಜ ಮತ್ತಿಮೂಡ ಭೇಟಿ ನೀಡಿ ಪರೀಶೀಲಿಸಿದರು. ಯಾವುದೇ ರೀತಿ ಆಹಾರ ಸಾಮಗ್ರಿ ಕಡಿಮೆಯಾಗದಂತೆ ನೊಡಿಕೊಳ್ಳುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.
ನಂತರ ಕುದಮೂಡ, ಕಲಕುಟಗಾ, ಲೇಂಗಟಿ, ಮತ್ತಿತರ ಗ್ರಾಮಗಳಿಗೆ ತೆರಳಿ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದರು. ಹೊರ ರಾಜ್ಯದಿಂದ ಆಗಮಿಸುವವರನ್ನು ಮನೆಗೆ ಕರೆದುಕೊಳ್ಳದೆ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸುವಂತೆ ಮನವಿ ಮಾಡಿದರು.