ಹೊಸಪೇಟೆ: ‘ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಎಲ್ಲರೂ ಗೌರವಿಸೋಣ. ಎಂದಿನಂತೆ ಸೌಹಾರ್ದತೆಯಿಂದ ಇರೋಣ’ ಎಂದು ಉಪವಿಭಾಗಾಧಿಕಾರಿ ತನ್ವೀರ್ ಶೇಖ್ ಆಸಿಫ್ ಹೇಳಿದರು.
ಶನಿವಾರ ನಗರದ ಪಟ್ಟಣ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ‘ಇಲ್ಲಿನ ಜನ ಶಾಂತಿಪ್ರಿಯರು. ಮೊದಲಿನಿಂದಲೂ ಸೌಹಾರ್ದತೆಯಿಂದ ಬಾಳ್ವೆ ನಡೆಸುತ್ತಿದ್ದಾರೆ. ವಾಸ್ತವವಾಗಿ ಶಾಂತಿ ಸಭೆಯ ಅಗತ್ಯವಿರಲಿಲ್ಲ. ಆದರೆ, ಶಿಷ್ಟಾಚಾರಕ್ಕಾಗಿ ನಡೆಸಲಾಗುತ್ತಿದೆ’ ಎಂದರು.
‘ಕೋರ್ಟ್ ತೀರ್ಪಿಗೆ ಎಲ್ಲರೂ ತಲೆಬಾಗಬೇಕು. ಯಾರು ಕೂಡ ದುಡುಕಬಾರದು. ಯುವಕರಿಗೆ ಹಿರಿಯರು ಬುದ್ಧಿಮಾತು ಹೇಳಬೇಕು. ಎಲ್ಲರೂ ಸೌಹಾರ್ದತೆಯಿಂದ ಇದ್ದರಷ್ಟೇ ನಾವು ಹಾಗೂ ನಮ್ಮ ಊರು ಆರ್ಥಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯ’ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ಲಾವಣ್ಯ ಮಾತನಾಡಿ, ‘ದೇಶದ ಸರ್ವೊಚ್ಚ ನ್ಯಾಯಾಲಯ ಕೊಟ್ಟಿರುವ ತೀರ್ಪನ್ನು ಎಲ್ಲರೂ ಸ್ವಾಗತಿಸೋಣ. ಎರಡೂ ಕಡೆಯವರಿಗೂ ಸಮಾಧಾನವಾಗುವಂತೆ, ತಕ್ಕಡಿಯಲ್ಲಿ ಸರಿಸಮಾನವಾಗಿ ಅಳೆದು ತೂಗಿ ನ್ಯಾಯ ಕೊಡಲು ಆಗುವುದಿಲ್ಲ. ತೀರ್ಪಿನಿಂದ ಕೆಲವರಿಗೆ ಖುಷಿ, ಕೆಲವರಿಗೆ ದುಃಖ ಆಗಬಹುದು. ಅದನ್ನು ಸಮನಾಗಿ ಸ್ವೀಕರಿಸಬೇಕು’ ಎಂದು ಹೇಳಿದರು.
ಡಿ.ವೈ.ಎಸ್.ಪಿ. ವಿ. ರಘುಕುಮಾರ, ಸಿ.ಪಿ.ಐ.ಗಳಾದ ಸಿದ್ದೇಶ್ವರ, ಪರಸಪ್ಪ ಭಜಂತ್ರಿ, ತಹಶೀಲ್ದಾರ್ ಡಿ.ಜಿ. ಹೆಗಡೆ, ಪ್ರಸಾದ್ ಗೋಖಲೆ, ಸಂಚಾರ ಇನ್ಸ್ಪೆಕ್ಟರ್ ಕಾಶಿನಾಥ್ ಇದ್ದರು.