ಹೊಸಪೇಟೆ: ಸೇವಿಯರ್ ಅಂಗವಿಕಲರ ಸೇವಾ ಸಮಿತಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಅಂಧರ ಚದುರಂಗ ಪಂದ್ಯಾವಳಿಯಲ್ಲಿ ಮೈಸೂರಿನ ಶಶಿಧರ್ ಪ್ರಥಮ ಬಹುಮಾನ ಗಳಿಸಿದ್ದಾರೆ.
ಇಲ್ಲಿನ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಸಭಾ ಭವನದಲ್ಲಿ ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ಶಶಿಧರ್ ಉತ್ತಮ ಸಾಧನೆ ತೋರಿ ಪ್ರಶಸ್ತಿ ಗೆದ್ದರು. ಅವರಿಗೆ ₹10 ಸಾವಿರ ನಗದು, ಟ್ರೋಫಿ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಎ.ಆರ್. ರಮೇಶ್ ದ್ವಿತೀಯ ಬಹುಮಾನ ₹8 ಸಾವಿರ, ತೃತೀಯ ಬಹುಮಾನ ಗಿಟ್ಟಿಸಿದ ಬೆಂಗಳೂರಿನ ರವಿಕಿರಣ್ ಅವರಿಗೆ ₹6 ಸಾವಿರ ನಗದು ಪ್ರದಾನ ಮಾಡಲಾಯಿತು. ನಾಲ್ಕು ಮತ್ತು ಐದನೇ ಸ್ಥಾನ ಪಡೆದ ಬೆಂಗಳೂರಿನವರೇ ಆದ ಈ. ವಿಜಯ ಹಾಗೂ ಸ್ಯಾಮುವೆಲ್ ಮನೋಹರ್ ಅವರಿಗೆ ಕ್ರಮವಾಗಿ ₹4, ₹2 ಸಾವಿರ ನಗದು, ಪ್ರಮಾಣ ಪತ್ರ ವಿತರಿಸಲಾಯಿತು.
ಆ. 23ರಿಂದ ಆರಂಭಗೊಂಡಿದ್ದ ಪಂದ್ಯಾವಳಿಯಲ್ಲಿ ಒಟ್ಟು 77 ಜನ ಪಾಲ್ಗೊಂಡಿದ್ದರು. ಸಮಿತಿಯಸಂಸ್ಥಾಪಕ ಕಾರ್ಯದರ್ಶಿ ಡಿ.ಎನ್. ಸಂತೋಷ್ ಕುಮಾರ್ , ಉಪಾಧ್ಯಕ್ಷ ಡಿ.ಎನ್. ಮಣಿಕಂಠ, ಸ್ಕೌಟ್ಸ್ ಮತ್ತು ಗೈಡ್ಸ್ನ ಕಾರ್ಯದರ್ಶಿ ರಾಜಶೇಖರ್, ಉದ್ಯಮಿಗಳಾದಗೌತಮ್, ವಿಶ್ವನಾಥ, ನಿಕೇಶ್, ರವಿಕುಮಾರ ಇದ್ದರು.