ಹೊಸಪೇಟೆ: ಅಬುಧಾಬಿಯಲ್ಲಿ ಇತ್ತೀಚೆಗೆ ನಡೆದ ವಿಶ್ವ ವಿಶೇಷಚೇತನರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇಲ್ಲಿನ ‘ಸಾಧ್ಯ’ ವಸತಿಯುತ ಶಾಲೆಯ ವಿಶೇಷ ಮಕ್ಕಳು ಒಂಬತ್ತು ಪದಕ ಜಯಿಸಿ ಸಾಧನೆ ಮಾಡಿದ್ದಾರೆ.
ಪವರ್ ಲಿಫ್ಟಿಂಗ್ನಲ್ಲಿ ಎಚ್.ವಿ. ವೀಣಾ ತಲಾ ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕ,ಸುಶಾಂತೋ ಬೋಸ್ ನಾಲ್ಕು ಕಂಚು, ಸೈಕ್ಲಿಂಗ್ನಲ್ಲಿ ಓಂಕಾರ ಮಲ್ಲಪ್ಪ ರಾಜಗೋಳ್ಕರ್ ಬೆಳ್ಳಿ ಗೆದ್ದಿದ್ದಾರೆ.
‘ಕೇಂದ್ರ ಯುವಜನ ಕ್ರೀಡಾ ಇಲಾಖೆಯು ಚಿನ್ನದ ಪದಕ ಗೆದ್ದವರಿಗೆ ₹5 ಲಕ್ಷ, ಬೆಳ್ಳಿ ಪದಕ ಜಯಿಸಿದವರಿಗೆ ₹3 ಲಕ್ಷ ಹಾಗೂ ಕಂಚಿನ ಪದಕದೊಂದಿಗೆ ಮರಳಿದವರಿಗೆ₹1 ಲಕ್ಷ ನಗದು ಬಹುಮಾನ ಘೋಷಿಸಿದೆ’ ಎಂದು ವಸತಿ ಶಾಲೆಯ ಸಂಸ್ಥಾಪಕಿ ಕೆ.ಟಿ. ಆರತಿ ತಿಳಿಸಿದ್ದಾರೆ.
ಅಬುದಾಭಿಯಿಂದ ಭಾನುವಾರ ಬೆಳಿಗ್ಗೆ ನಗರದ ರೈಲು ನಿಲ್ದಾಣಕ್ಕೆ ಬಂದಿಳಿದ ಸಾಧಕರಿಗೆ ಭವ್ಯ ಸ್ವಾಗತ ನೀಡಲಾಯಿತು. ನಂತರ ತೆರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳ ಮೂಲಕ ಶಾಲೆಯ ವರೆಗೆ ಮೆರವಣಿಗೆ ಮಾಡಲಾಯಿತು. ಪವರ್ ಲಿಫ್ಟಿಂಗ್ ತರಬೇತುದಾರ ದಯಾನಂದ ಕಿಚಿಡಿ ಇದ್ದರು.