ಹೊಸಪೇಟೆ: ದೀನ್ ದಯಾಳ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಅಂಗವಾಗಿ ಬೀದಿ ಬದಿ ವ್ಯಾಪಾರಿಗಳಿಗೆ ನಗರಸಭೆ ಹಮ್ಮಿಕೊಂಡಿರುವ ಎರಡು ದಿನಗಳ ತರಬೇತಿ ಶಿಬಿರಕ್ಕೆ ನಗರದಲ್ಲಿಬುಧವಾರ ಚಾಲನೆ ನೀಡಲಾಯಿತು.
‘ಬೀದಿ ಬದಿ ವ್ಯಾಪಾರಿಗಳ ಹಿತ ಕಾಯಲು ಕಾಯ್ದೆ ತರಲಾಗಿದೆ. ಎಲ್ಲ ವ್ಯಾಪಾರಿಗಳು ನಗರಸಭೆಯಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು. ಇದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದು’ ಎಂದು ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಪೌರಾಯುಕ್ತ ವಿ. ರಮೇಶ್ ತಿಳಿಸಿದರು.
‘ಬೀದಿ ಬದಿ ವ್ಯಾಪಾರಿಗಳಿಗೆ ಏನಾದರೂ ಸಮಸ್ಯೆ ಎದುರಾದರೆ ನಗರಸಭೆ ಗಮನಕ್ಕೆ ತರಬೇಕು. ಅದಕ್ಕೆ ಸ್ಪಂದಿಸಿ ಪರಿಹಾರ ಒದಗಿಸಲಾಗುವುದು’ ಎಂದು ಹೇಳಿದರು.
ಬಿ.ಡಿ.ಸಿ.ಸಿ. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಶಶಿಕಾಂತ ಮಾತನಾಡಿ, ‘ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಒದಗಿಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ’ ತಿಳಿಸಿದರು.
ಪ್ರಭಾರ ತಾಲ್ಲೂಕು ವೈದ್ಯಾಧಿಕಾರಿ ಪವನ್ ಕುಮಾರ ಮಾತನಾಡಿ, ‘ಕಡಿಮೆ ಬೆಲೆಯಲ್ಲಿ ಆಹಾರ ದೊರೆಯುತ್ತದೆ ಎಂದು ಜನ ಬೀದಿ ಬದಿಯಲ್ಲಿ ಉಪಾಹಾರ, ಆಹಾರ ಸೇವಿಸುತ್ತಾರೆ. ಹಾಗಾಗಿ ವ್ಯಾಪಾರಿಗಳು ಸ್ವಚ್ಛತೆ, ಗುಣಮಟ್ಟಕ್ಕೆ ಆದ್ಯತೆ ನೀಡಬೇಕು’ ಎಂದು ಹೇಳಿದರು.
ನಗರಸಭೆ ಸದಸ್ಯ ಎ.ಬಸವರಾಜ, ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ, ಶಿಬಿರದ ಸಂಘಟನಾಕಾರ ಚಿದಾನಂದ, ಪ್ರಾಧ್ಯಾಪಕ ದಯಾನಂದ ಕಿನ್ನಾಳ ಇದ್ದರು.