ವಿಜಯನಗರ (ಹೊಸಪೇಟೆ): ‘ಕಾಯಕ ನಿಷ್ಠೆಯ ಮೂಲಕ ಸಮಾಜದಲ್ಲಿ ಗೌರವಕ್ಕೆ ಪಾತ್ರರಾದ ಸೂಲಗಿತ್ತಿ ನರಸಮ್ಮ ಎಲ್ಲರಿಗೂ ಮಾದರಿ’ ಎಂದು ಸಂಶೋಧನಾ ವಿದ್ಯಾರ್ಥಿ ಕೆ.ಎಸ್. ಸುಧಾಕರ ತಿಳಿಸಿದರು.
ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದೇಸಿ ಮಾತು–4 ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ನರಸಮ್ಮ ವೃತ್ತಿ ಮತ್ತು ನಾಟಿ ಔಷಧಿ ನೀಡುವ ಮೂಲಕ ಮನೆಮಾತಾಗಿದ್ದರು. ಅವರು ಆಧುನಿಕ ತಂತ್ರಜ್ಞಾನಕ್ಕೆ ಸವಾಲಾಗುವ ಮೂಲಕ ದೇಸಿ ಪದ್ಧತಿಯಿಂದ ಸುಮಾರು 1,500 ಸಹಜ ಹಾಗೂ ಸರಳ ಹೆರಿಗೆಗಳನ್ನು ಮಾಡಿದ್ದರು’ ಎಂದರು.
‘ಗ್ರಾಮೀಣ ಭಾಗದ ಮಹಿಳೆಯರಲ್ಲಿ ಹೆರಿಗೆಯ ನೋವು ಕಾಣಿಸಿಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಎಲ್ಲ ಕೆಲಸ ಬದಿಗೊತ್ತಿ ಹೆರಿಗೆ ಮಾಡುತ್ತಿದ್ದರು. ಜಾತಿ-ಮತ-ಧರ್ಮದ ಕರಿನೆರಳು ಬೀಳಿಸಿಕೊಳ್ಳದೇ ಬದುಕಿದ್ದರು’ ಎಂದು ತಿಳಿಸಿದರು.
ವಿಭಾಗದ ಹಿರಿಯ ಪ್ರಾಧ್ಯಾಪಕ ಮಂಜುನಾಥ ಬೇವಿನಕಟ್ಟಿ, ಪ್ರಾಧ್ಯಾಪಕ ಸಿ.ಟಿ.ಗುರುಪ್ರಸಾದ್, ಸಂಶೋಧನಾ ವಿದ್ಯಾರ್ಥಿಗಳಾದ ಡಿ.ಎಂ. ಪ್ರಹ್ಲಾದ, ಐ.ಡಿ. ಧನಲಕ್ಷ್ಮಿ, ಮಣಿಕಂಠ, ನಾಗೇಶ ಪೂಜಾರ್, ವಿದ್ಯಾ ಪಾಟಕರ್, ಕುಮಾರ ಎಲಿಬಳ್ಳಿ, ಬಿಳೇನಿ ಸಿದ್ದು ಬಿರಾದರ್, ಮಹಾಂತೇಶ್, ಬೆಟ್ಟಪ್ಪ, ಜಿ. ರಮೇಶ ಇದ್ದರು.