ಹಗರಿಬೊಮ್ಮನಹಳ್ಳಿ: ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಸಹೋದರನ ನೆನಪಿನಲ್ಲಿ ಹಿರಿಯ ಸಹೋದರ ದೇವಸ್ಥಾನದ ಗೋಪುರ ನಿರ್ಮಿಸಿದ್ದಾನೆ.
ಗ್ರಾಮದ ಕೃಷಿಕರಾದ ಆರ್.ಹನುಮರೆಡ್ಡಿ, ನಾಗರತ್ನಮ್ಮ ಅವರ ಮಗ, ಗುತ್ತಿಗೆದಾರ ಆರ್.ಕೇಶವರೆಡ್ಡಿ, ತಾಲ್ಲೂಕಿನ ಅಂಕಸಮುದ್ರದ ಆಂಜನೇಯ ದೇವಸ್ಥಾನದ ಗೋಪುರ ನಿರ್ಮಿಸಿದ್ದಾರೆ. ಕಿರಿಯ ಸಹೋದರ ಜಂಬಣ್ಣ ಅವರು ತಾಲ್ಲೂಕಿನ ಬ್ಯಾಸಿಗಿದೇರಿ ಗ್ರಾಮದ ಬಳಿ ರಸ್ತೆ ಅಪಘಾತದಲ್ಲಿ 2003ರ ಡಿ.12ರಂದು ಮೃತಪಟ್ಟಿದ್ದರು.
ಅಪಘಾತಕ್ಕೆ ಕಾರಣರಾದ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲೀಕರ ವಿರುದ್ಧ ಠಾಣೆಗೆ ದೂರು ಸಲ್ಲಿಸಿದ್ದರು. ಅವಘಡಕ್ಕೆ ಕಾರಣನಾದ ಚಾಲಕನಿಗೆ ಶಿಕ್ಷೆ ಕೊಡಿಸಲು ಪಣ ತೊಟ್ಟ ಕೇಶವರೆಡ್ಡಿ, ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸತತ 17 ವರ್ಷಗಳ ಹೋರಾಟದ ಬಳಿಕ, ಕಳೆದ ವರ್ಷ ನ್ಯಾಯಾಲಯದ ಲೋಕ ಅದಾಲತ್ನಲ್ಲಿ ಧನ ಪರಿಹಾರ ನೀಡುವಂತೆ ಆದೇಶ ಹೊರಬಿದ್ದಿದೆ. ಬಂದ ಪರಿಹಾರದ ಮೊತ್ತ ₹2 ಲಕ್ಷ ಹಾಗೂ ವೈಯಕ್ತಿಕವಾಗಿ ₹5 ಲಕ್ಷ ಸೇರಿಸಿ ದೇವಸ್ಥಾನದ ಗೋಪುರ ನಿರ್ಮಿಸಿದ್ದಾರೆ.
ಮಂಗಳವಾರ (ಏ.13) ಗೋಪುರವನ್ನು ನಂದಿಪುರದ ಮಹೇಶ್ವರ ಸ್ವಾಮೀಜಿ ಉದ್ಘಾಟಿಸುವರು. ಆಂಜನೇಯ ದೇವಸ್ಥಾನವನ್ನು ಗ್ರಾಮದ ವಾಸಪ್ಪ ರೆಡ್ಡಿ 2012ರಲ್ಲಿ ನಿರ್ಮಿಸಿದ್ದರು. ಗೋಪುರ ನಿರ್ಮಾಣವಾಗಿರಲಿಲ್ಲ. ಸಹೋದರನ ಸ್ಮರಣೆಯಲ್ಲಿ ಕೇಶವರೆಡ್ಡಿ ಆ ಕೆಲಸ ಮಾಡಿದ್ದಾರೆ.