ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ತಿಳಿವಳಿಕೆ; ಬಿಗುವಿನ ವಾತಾವರಣ

ಕಟ್ಟಡಗಳ ಅವಶೇಷ ತೆರವಿಗೆ ಬಂದಿದ್ದ ನಗರಸಭೆ ಸಿಬ್ಬಂದಿಯೊಂದಿಗೆ ವಾಗ್ವಾದ
Last Updated 15 ಡಿಸೆಂಬರ್ 2020, 16:09 IST
ಅಕ್ಷರ ಗಾತ್ರ

ಹೊಸಪೇಟೆ: ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ ಎಂದು ತಪ್ಪು ಭಾವಿಸಿ ನಗರಸಭೆ ಸಿಬ್ಬಂದಿಗೆ ಸ್ಥಳೀಯ ಯುವಕರು ಪ್ರತಿರೋಧ ತೋರಿಸಿ ಅವರ ಕೆಲಸಕ್ಕೆ ಅಡ್ಡಿಪಡಿಸಿದ್ದರಿಂದ ಮಂಗಳವಾರ ಸಂಜೆ ಇಲ್ಲಿನ ಹಜರತ್‌ ಷಾ ವಲಿ ಮಸೀದಿ ಬಳಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಸ್ಥಳೀಯ ಯುವಕರಿಗೆ ಮನವರಿಕೆ ಮಾಡಿಕೊಟ್ಟ ನಂತರ ವಾತಾವರಣ ತಿಳಿಗೊಂಡಿತು.

‘ನಗರಸಭೆಯು ಈ ಹಿಂದೆ ಮಸೀದಿಗೆ ಹೊಂದಿಕೊಂಡಂತೆ ನಿರ್ಮಿಸಿದ್ದ ಕೆಲ ಮಳಿಗೆಗಳನ್ನು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿತ್ತು. ಬಳಿಕ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಕಾರ್ಯಾಚರಣೆ ಕೈಬಿಟ್ಟಿತು. ಕಟ್ಟಡಗಳ ಅವಶೇಷಗಳು ಅಲ್ಲಿಯೇ ಬಿದ್ದದ್ದರಿಂದ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಮಂಗಳವಾರ ಸಂಜೆ ನಗರಸಭೆ ಸಿಬ್ಬಂದಿಯು ಜೆ.ಸಿ.ಬಿ., ಟ್ರ್ಯಾಕ್ಟರ್‌ನೊಂದಿಗೆ ಸ್ಥಳಕ್ಕೆ ತೆರಳಿ, ಅವಶೇಷ ತೆರವುಗೊಳಿಸಲು ಮುಂದಾಗಿದ್ದರು. ತಡೆಯಾಜ್ಞೆಯಿದ್ದರೂ ತೆರವು ಕಾರ್ಯಾಚರಣೆಗೆ ಬಂದಿದ್ದಾರೆ ಎಂದು ತಪ್ಪಾಗಿ ತಿಳಿದು ಅಲ್ಲಿದ್ದ ಯುವಕರು ನಗರಸಭೆಯ ಸಿಬ್ಬಂದಿಗೆ ತಡೆಯೊಡ್ಡಿದ್ದಾರೆ. ಬಳಿಕ ಅವರೊಂದಿಗೆ ವಾಗ್ವಾದ ನಡೆಸಿ, ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಯುವಕರಿಗೆ ವಸ್ತುಸ್ಥಿತಿ ತಿಳಿಸಿದ ನಂತರ ಸುಮ್ಮನಾದರು’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಇದೊಂದು ಆಕಸ್ಮಿಕವಾಗಿ ನಡೆದ ಘಟನೆ. ತಪ್ಪು ತಿಳಿವಳಿಕೆಯಿಂದ ಯುವಕರು ಆವೇಶಭರಿತರಾಗಿ ಆ ರೀತಿ ವರ್ತಿಸಿದ್ದಾರೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ’ ಎಂದು ತಿಳಿಸಿದ್ದಾರೆ.

‘ತಪ್ಪಾಗಿ ಭಾವಿಸಿ ನಮ್ಮ ಸಿಬ್ಬಂದಿಯ ಜತೆ ಸ್ಥಳೀಯ ಯುವಕರು ವಾಗ್ವಾದ ನಡೆಸಿ, ನೂಕಾಟ, ತಳ್ಳಾಟ ನಡೆಸಿದ್ದಾರೆ. ಬೇರೇನೂ ಆಗಿಲ್ಲ. ಬಳಿಕ ವಿಷಯ ಗೊತ್ತಾಗಿ ಸುಮ್ಮನಾಗಿದ್ದಾರೆ’ ಎಂದು ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT