ಹೊಸಪೇಟೆ (ವಿಜಯನಗರ): ‘ಕಲಾಕೃತಿಗಳೆಂಬ ಸಾಧನದ ಮೂಲಕ ಎಲ್ಲ ವರ್ಗದ ಜನರನ್ನು ತಲುಪಬಹುದು. ಆ ಶಕ್ತಿ ಕಲೆಗಿದೆ’ ಎಂದು ವಿಜಯ ಚಿತ್ರಕಲಾ ಕಾಲೇಜಿನ ಪ್ರಾಚಾರ್ಯ ಬಸವರಾಜ ಗವಿಮಠ ತಿಳಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಕಲಾ ಗ್ಯಾಲರಿಯಲ್ಲಿ ಆನಂದ ಪತ್ರಿಮಠ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಕಲಾಕೃತಿಗಳ ರಚನೆ ಒಂದು ತಪಸ್ಸಿನ ಕೆಲಸ. ಅದು ಶ್ರದ್ಧೆ, ಆಸಕ್ತಿಯನ್ನು ಬಯಸುವ ಕ್ಷೇತ್ರ. ಜಾಗತೀಕರಣ, ತಂತ್ರಜ್ಞಾನದಲ್ಲಾದ ಬದಲಾವಣೆಯಿಂದ ದೃಶ್ಯಕಲಾ ಕ್ಷೇತ್ರದಲ್ಲೂ ಬದಲಾವಣೆಗಳಾಗಿವೆ ಎಂದರು.
ಹಿರಿಯ ಕಲಾವಿದ ನಾರಾಯಣ ಜೋಶಿ, ದೃಶ್ಯ ಕಲಾಕೃತಿಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯಿದೆ. ಬಹುತೇಕ ಕಲಾವಿದರು ಸಂವಹನದ ಕೊರತೆಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಕಲೆಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ಮಾಧ್ಯಮಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು ಉತ್ತಮ ಎಂದು ಹೇಳಿದರು.
ಕುಲಸಚಿವ ಎ.ಸುಬ್ಬಣ್ಣ ರೈ ಮಾತನಾಡಿ, ಕಲಾವಿದರು ಕಲೆಯ ಮೂಲಕ ನವರಸಗಳನ್ನು ಮತ್ತು ಭಾವನೆಗಳನ್ನು ಅಭಿವ್ಯಕ್ತಿಗೊಳಿಸುತ್ತಾರೆ. ದೃಶ್ಯಕಲಾ ವಿದ್ಯಾರ್ಥಿಗಳಿಗೆ ಕಲೆ ಒಂದು ವೇದಿಕೆ. ಅದರ ಮೂಲಕ ಅಕ್ಷರದ ಜ್ಞಾನದೊಂದಿಗೆ ಆದಾಯ ಕೂಡ ಗಳಿಸಬಹುದು ಎಂದರು.
ದೃಶ್ಯಕಲಾ ವಿಭಾಗದ ಮುಖ್ಯಸ್ಥ ಮೋಹನ್ರಾವ್ ಬಿ. ಪಾಂಚಾಳ್, ಮಣಿಕಂಠ, ಎಚ್.ಎನ್. ಕೃಷ್ಣೇಗೌಡ ಇದ್ದರು.