ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ತಪ್ಪದ ಬೈಗು ಬೆಳಗಿನ ತೊಳಲಾಟ

ಬಯಲು ಬಹಿರ್ದೆಸೆ ಮುಕ್ತ ಯೋಜನೆಯ ಕನಸು ನನಸಾಗುವುದು ಯಾವಾಗ?; ಬಯಲೇ ಜನರಿಗೆ ಆಸರೆ
Last Updated 18 ಅಕ್ಟೋಬರ್ 2021, 8:29 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಜಿಲ್ಲಾಡಳಿತದ ದಾಖಲೆಗಳ ಪ್ರಕಾರ ಅವಳಿ ಜಿಲ್ಲೆಗಳಾದ ಬಳ್ಳಾರಿ– ವಿಜಯನಗರದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಉತ್ತಮ ಸಾಧನೆಯಾಗಿದೆ. ಆದರೆ, ಇನ್ನೂ ಜನರ ಬೈಗು ಬೆಳಗಿನ ಸಂಕಟ, ತೊಳಲಾಟ ದೂರವಾಗಿಲ್ಲ.

ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಈಗಲೂ ಅನೇಕರಿಗೆ ವೈಯಕ್ತಿಕ ಶೌಚಾಲಯ ಮರೀಚಿಕೆಯಾಗಿದೆ. ಅಲ್ಲಲ್ಲಿ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಬೆಳೆಯುತ್ತಿರುವ ಜನಸಂಖ್ಯೆಗೆ ತಕ್ಕಂತೆ ಶೌಚಾಲಯಗಳು ಹೆಚ್ಚಾಗಿಲ್ಲ. ಇದು ಸಹಜವಾಗಿಯೇ ಜನ ಬಯಲಿಗೆ ಹೋಗುವ ಅನಿವಾರ್ಯತೆ ಸೃಷ್ಟಿಸಿದೆ.

ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಜನ ಈಗಲೂ ಮುಳ್ಳು, ಕಂಟಿಗಳನ್ನೇ ಆಶ್ರಯಿಸಿಕೊಂಡಿದ್ದಾರೆ. ಅನೇಕ ಕಡೆ ಇದ್ಯಾವುದೂ ಇರದ ಕಾರಣ ಮಹಿಳೆಯರು ಹಗಲಿನಲ್ಲಿ ಬೈಗಿನ ಕಷ್ಟ ನುಂಗಿಕೊಂಡು ರಾತ್ರಿಗಾಗಿ ಕಾಯುತ್ತ ಕೂರುತ್ತಾರೆ. ಹೊತ್ತೇರಿ ಕತ್ತಲಾಗುತ್ತಿದ್ದಂತೆ ಊರ ಹೊರಗೆ ಹೋಗುತ್ತಾರೆ. ಇದು ಮಹಿಳೆಯರ ಪಾಡಾದರೆ ಮುಖ್ಯರಸ್ತೆಯ ಎರಡೂ ಬದಿಯಲ್ಲಿ ಗಂಡಸರು ಕಾಣಿಸಿಕೊಳ್ಳುತ್ತಾರೆ.

ವಾಹನಗಳು ಹಾದು ಹೋದರೆ ಮುಖ ಮುಚ್ಚಿಕೊಳ್ಳುತ್ತಾರೆ. ಇದು ವಾಸ್ತವ ಪರಿಸ್ಥಿತಿಯ ಚಿತ್ರಣ.
ಜಿಲ್ಲಾ, ತಾಲ್ಲೂಕು ಕೇಂದ್ರಗಳಿಂದ ಬಹಳ ದೂರದಲ್ಲಿರುವ ಹಳ್ಳಿಗಳಷ್ಟೇ ಅಲ್ಲ, ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಮಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಅದಕ್ಕೆ ತಾಜಾ ನಿದರ್ಶನ, ಹೊಸಪೇಟೆ ನಗರಕ್ಕೆ ಸನಿಹದಲ್ಲೇ ಇರುವ ನಾಗೇನಹಳ್ಳಿ ಗ್ರಾಮ.

ಈ ಗ್ರಾಮದಲ್ಲಿ ಈಗಲೂ ಬಹುತೇಕರ ಮನೆಯಲ್ಲಿ ಶೌಚಾಲಯಗಳಿಲ್ಲ. ಜನರಿಗೆ ಬಯಲೇ ಆಲಯದಂತಾಗಿದೆ. ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಜನ ಚೊಂಬು ಕೈಯಲ್ಲಿ ಹಿಡಿದುಕೊಂಡು ಸಾಲು ಸಾಲಾಗಿ ಹೋಗುವ ದೃಶ್ಯ ಸಾಮಾನ್ಯವಾಗಿ ಗೋಚರಿಸುತ್ತದೆ. ಇದು ಅನೇಕ ವರ್ಷಗಳಿಂದ ಹೀಗೆಯೇ ನಡೆದುಕೊಂಡು ಬರುತ್ತಿದೆ. ಇದಕ್ಕೆ ಮುಕ್ತಿ ಯಾವಾಗ ಎನ್ನುವುದು ಈಗಲೂ ಯಕ್ಷ ಪ್ರಶ್ನೆಯಾಗಿದೆ.

ಇನ್ನು, ನಗರಕ್ಕೆ ಬಂದರೆ, ಜನಸಂಖ್ಯೆಗೆ ತಕ್ಕಂತೆ ಸಾಮೂಹಿಕ ಶೌಚಾಲಯಗಳಿಲ್ಲ. ಬಸ್‌ ನಿಲ್ದಾಣ, ರೈಲು ನಿಲ್ದಾಣ ಹೊರತುಪಡಿಸಿ ಅನ್ಯ ಕಡೆಗಳಲ್ಲಿ ಶೌಚಾಲಯಗಳೇ ಇಲ್ಲ. ಒಂದೆರಡು ಕಡೆ ಸಾರ್ವಜನಿಕ ಶೌಚಾಲಯಗಳಿದ್ದರೂ ಅವುಗಳ ಸೂಕ್ತ ನಿರ್ವಹಣೆ ಇಲ್ಲ. ಯಾರಿಗೆ ನಿರ್ವಹಣೆಗೆ ಕೊಡಬೇಕು ಎಂಬ ಗೊಂದಲದಲ್ಲಿಯೇ ಕೆಲವು ಶೌಚಾಲಯಗಳು ಬಾಗಿಲು ತೆರೆದಿಲ್ಲ. ಐಷಾರಾಮಿ ಕಟ್ಟಡಗಳಲ್ಲಿ ಕುಳಿತು ಸಭೆ ನಡೆಸುವ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಈ ವಿಷಯ ಗಂಭೀರವಾಗಿ ಕಂಡಿಲ್ಲ.

‘ಜನಪ್ರತಿನಿಧಿಗಳು, ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಎಲ್ಲ ರೀತಿಯ ಸವಲತ್ತುಗಳು ಇರುತ್ತವೆ. ಅವರಿಗೆ ಜನರ ನೋವು– ಸಂಕಟ ಅರ್ಥವಾಗುವುದೇ ಇಲ್ಲ. ಜನರ ಅಗತ್ಯ ಕುರಿತು ತಲೆಕೆಡಿಸಿಕೊಳ್ಳುವುದೇ ಇಲ್ಲ. ನಾವು ಈಗ ಆಜಾದಿ ಕಾ ಅಮೃತ್‌ಮಹೋತ್ಸವ ಆಚರಿಸುತ್ತಿದ್ದೇವೆ. ಈ 75 ವರ್ಷಗಳ ಒಟ್ಟಾರೆ ಸಾಧನೆಯನ್ನು ಒಮ್ಮೆ ಹಿಂತಿರುಗಿ ನೋಡಿದರೆ ನಿರಾಶೆಯಾಗುತ್ತದೆ. ಸಾಧನೆಗಳ ಬಗ್ಗೆ ಕೊಚ್ಚಿಕೊಳ್ಳುವ ನಾಯಕರನ್ನು ಕಂಡರೆ ಮುಜುಗರವಾಗುತ್ತದೆ. ಇಷ್ಟು ವರ್ಷಗಳ ಬಳಿಕವೂ ಸರ್ಕಾರ, ಜನರಿಗೆ ಘನತೆಯಿಂದ ಬದುಕುವ ವಾತಾವರಣ ಕಲ್ಪಿಸಲಿಲ್ಲವಲ್ಲಾ’ ಎಂದು ಹಲವು ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ.

‘ಯಾವುದೇ ಸರ್ಕಾರಕ್ಕೆ ಶಿಕ್ಷಣ, ಆರೋಗ್ಯ, ಸ್ವಚ್ಛತೆ ಆದ್ಯತೆಯ ವಿಷಯಗಳಾಗಬೇಕು. ಆದರೆ, ನಮ್ಮಲ್ಲಿ ಅವುಗಳಿಗೆ ಕೊನೆಯ ಆದ್ಯತೆ ಇದೆ’ ಎಂದು ನಿವೃತ್ತ ಶಿಕ್ಷಕ ಬಸವರಾಜ ವಿಷಾದದಿಂದ ನುಡಿದರು. ‘ವೈಯಕ್ತಿಕ ಶೌಚಾಲಯಗಳು ಇರದೇ ಇರುವ ಕಾರಣ ಮಹಿಳೆಯರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಹಗಲಿನಲ್ಲಿ ಜನ ಓಡಾಡುತ್ತಾರೆಂದು ಅವರ ಎಲ್ಲ ದೈನಂದಿನ ಕರ್ಮಗಳನ್ನು ರಾತ್ರಿಗೆ ಇಟ್ಟುಕೊಂಡಿದ್ದಾರೆ. ನಿಸರ್ಗದ ಕರೆ ಬಂದಾಗ ಅದಕ್ಕೆ ತಕ್ಕಂತೆ ನಡೆಯುವುದು ಮನುಷ್ಯನ ಸ್ವಭಾವ. ಆದರೆ, ಮರ್ಯಾದೆಗೆ ಅಂಜಿ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದು ಗೃಹಿಣಿ ಶೋಭಾ ಹೇಳಿದರು.

ಇನ್ನಷ್ಟೇ ಆಗಬೇಕಿದೆ ಬಹಿರ್ದೆಸೆ ಮುಕ್ತ
ಹಗರಿಬೊಮ್ಮನಹಳ್ಳಿ
: ಪಟ್ಟಣ ಸೇರಿದಂತೆ ತಾಲ್ಲೂಕಿನ 21 ಗ್ರಾಮ ಪಂಚಾಯಿತಿಗಳು ಇನ್ನಷ್ಟೇ ಬಹಿರ್ದೆಸೆ ಮುಕ್ತವಾಗಬೇಕಿದೆ.
ತಾಲ್ಲೂಕಿನ 21 ಗ್ರಾಮ ಪಂಚಾಯಿತಿಗಳಲ್ಲಿ ಈ ವರ್ಷದ ಎರಡನೇ ಕಂತಿನಲ್ಲಿ 317 ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. 313 ಅರ್ಜಿಗಳು ಸಲ್ಲಿಕೆಯಾಗಿವೆ. ಜಿಲ್ಲಾ ಪಂಚಾಯಿತಿಯಿಂದ 286 ಅರ್ಜಿಗಳು ಅನುಮೋದನೆಗೊಂಡಿವೆ. ಕೇವಲ ಸಹಾಯಧನಕ್ಕಾಗಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕಾರಿ ಬಸವನಗೌಡ ಹೇಳಿದರು. ಪಟ್ಟಣದ ಯುವಕ ವೀರೇಶ್ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿತ್ಯ ಎಲ್ಲ ವಾರ್ಡ್‍ಗಳಿಗೆ ಬೈಸಿಕಲ್‍ನಲ್ಲಿ ತೆರಳಿ ಶೌಚಾಲಯದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಎಲ್ಲ ಪಂಚಾಯಿತಿಗಳು ಬಯಲು ಬಹಿರ್ದೆಸೆ ಮುಕ್ತ
ಹೂವಿನಹಡಗಲಿ
: ತಾಲ್ಲೂಕಿನ 26 ಗ್ರಾಮ ಪಂಚಾಯಿತಿಗಳನ್ನು ಸರ್ಕಾರ ‘ಬಯಲು ಬಹಿರ್ದೆಸೆ ಮುಕ್ತ’ ಎಂದು ಘೋಷಿಸಿದೆ. ಮನೆಯಲ್ಲಿ ಶೌಚಾಲಯ ಕಟ್ಟಿಕೊಂಡಿದ್ದರೂ ಗ್ರಾಮೀಣ ಜನರು ಇನ್ನು ಚೊಂಬು ಹಿಡಿದು ಬಯಲಿಗೆ ಹೋಗುವುದನ್ನು ನಿಲ್ಲಿಸಿಲ್ಲ. ಹೀಗಾಗಿ ಅಧಿಕಾರಿಗಳು ಮತ್ತು ಪಂಚಾಯಿತಿ ಸಿಬ್ಬಂದಿ ಶೌಚಾಲಯ ಬಳಕೆ ಅಭಿಯಾನ ಶುರು ಮಾಡಿದ್ದಾರೆ.
ತಾಲ್ಲೂಕಿನ 26 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಮೊದಲ ಹಂತದಲ್ಲಿ 38,480 ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಡಲಾಗಿದೆ. ಹೆಚ್ಚುವರಿ ಬೇಡಿಕೆ ಸಲ್ಲಿಕೆಯಾಗಿದ್ದರಿಂದ ಎರಡನೇ ಹಂತದಲ್ಲಿ 335 ಶೌಚಾಲಯ ನಿರ್ಮಾಣಕ್ಕೆ ಚಾಲನೆ ನೀಡಿ, 144 ಶೌಚಾಲಯ ಪೂರ್ಣಗೊಳಿಸಲಾಗಿದೆ. 191 ಕಾಮಗಾರಿ ಪ್ರಗತಿಯಲ್ಲಿವೆ.
ಹಿಂದೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಡಾ. ಕೆ.ವಿ. ರಾಜೇಂದ್ರ ಅವರು ತಾಲ್ಲೂಕಿನ ಹಿರೇಕೊಳಚಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿ ಶೌಚಾಲಯ ಅಭಿಯಾನಕ್ಕೆ ಚಾಲನೆ ನೀಡಿದ್ದರು. ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮಿಸಿದ್ದರು.

ಹಳ್ಳಿಗಳಲ್ಲಿ ಕೆಲವರು ಶೌಚಾಲಯ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ. ಮನೆಯ ಆವರಣದಲ್ಲಿ ನಿರ್ಮಾಣವಾಗಿರುವ ಶೌಚಾಲಯ ಕಟ್ಟಡ ಕೃಷಿ ಪರಿಕರ, ಗುಜರಿ ಸಾಮಗ್ರಿ ಇಡುವ ಕೋಣೆಯಾಗಿದೆ. ಮನೆಯಲ್ಲಿ ಶೌಚಗೃಹವಿದ್ದರೂ ಹೊರಗಡೆ ಹೋಗುವ ಜನರನ್ನು ತಡೆದು ಶೌಚಾಲಯ ಕಡೆ ಕಳಿಸುವ ಹೆಚ್ಚುವರಿ ಕೆಲಸ ಈಗ ಅಧಿಕಾರಿಗಳು ಮತ್ತು ಪಂಚಾಯಿತಿ ಸಿಬ್ಬಂದಿಯ ಹೆಗಲೇರಿದೆ.

ಶೌಚಾಲಯಗಳಿಗೆ ನೆರವು
ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಆರ್ಥಿಕ ನೆರವೂ ನೀಡುತ್ತಿದೆ. ಪರಿಶಿಷ್ಟ ಜಾತಿ, ವರ್ಗದ ಜನರಿಗೆ ₹ 15 ಸಾವಿರ, ಉಳಿದವರಿಗೆ ₹ 12 ಸಾವಿರ ನೆರವು ನೀಡಲಾಗುತ್ತಿದೆ. ಇದಲ್ಲದೆ, ನರೇಗಾ ಯೋಜನೆಯಡಿ ಕಕ್ಕಸು ಗುಂಡಿಗಳ ನಿರ್ಮಾಣಕ್ಕೂ ಶ್ರಮದಾನದ ಸಹಾಯ ದೊರೆಯುತ್ತಿದೆ. ಆದರೆ, 12 ಅಥವಾ 15 ಸಾವಿರದಲ್ಲಿ ಶೌಚಾಲಯ ನಿರ್ಮಾಣ ಸಾಧ್ಯವಿಲ್ಲ. ಕನಿಷ್ಠ ₹ 25 ಸಾವಿರವಾದರೂ ಬೇಕು ಎಂದು ಅಧಿಕಾರಿಗಳೇ ಹೇಳುತ್ತಾರೆ.

ಅಧಿಕಾರಿಗಳ ಪ್ರಕಾರವೇ, ‘ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತವಾಗಲು ಬಹಳ ದೂರ ಸಾಗಬೇಕು. ಶೇ 40ರಷ್ಟು ಮಂದಿ ಈಗಲೂ ನೈಸರ್ಗಿಕ ಕರೆಗಳಿಗೆ ಬಯಲನ್ನೇ ಆಶ್ರಯಿಸಿದ್ದಾರೆ. ವೈಯಕ್ತಿಕ ಅಥವಾ ಸಾಮೂಹಿಕ ಶೌಚಾಲಯಗಳಿದ್ದವರೂ ಅದನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಜನರಿಗೆ ಹೂಗುಚ್ಛ ಕೊಟ್ಟು ಶೌಚಾಲಯಗಳನ್ನು ಬಳಸುವಂತೆ ಮನವೊಲಿಸಲಾಗುತ್ತಿದೆಯಂತೆ. ಕೆಲವರಿಗೆ ಶೌಚಾಲಯ ಹೇಗೆ ಬಳಸಬೇಕು ಎಂದೂ ಹೇಳಕೊಡಬೇಕಿದೆಯಂತೆ!

ಅಂಕಿ ಅಂಶ

ಬಳ್ಳಾರಿ–ವಿಜಯನಗರ ಜಿಲ್ಲೆಯ ತಾಲ್ಲೂಕುವಾರು ವೈಯಕ್ತಿಕ ಕೌಟುಂಬಿಕ ಶೌಚಾಲಯಗಳ ವಿವರ
ತಾಲ್ಲೂಕು; ಸಾಧನೆ; ನಿರ್ಮಿಸಬೇಕಿರುವ ಶೌಚಾಲಯ
ಬಳ್ಳಾರಿ;37646;291
ಹೊಸಪೇಟೆ;17847;283
ಹೂವಿನಹಡಗಲಿ;39437;138
ಹಗರಿಬೊಮ್ಮನಹಳ್ಳಿ;30765;261
ಹರಪನಹಳ್ಳಿ;49857;521
ಕಂಪ್ಲಿ;16467;330
ಕೊಟ್ಟೂರು;14962;516
ಕೂಡ್ಲಿಗಿ;32879;477
ಕುರುಗೋಡು;18693;219
ಸಂಡೂರು;36099;313
ಸಿರುಗುಪ್ಪ;38882; 207

ಪ್ರಜಾವಾಣಿ ತಂಡ: ಶಶಿಕಾಂತ ಎಸ್‌. ಶೆಂಬೆಳ್ಳಿ, ಸಿ.ಶಿವಾನಂದ, ಕೆ. ಸೋಮಶೇಖರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT