ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಶುಕ್ರವಾರ ಭಾರಿ ಹೆಚ್ಚಳವಾಗಿದೆ. ಸದ್ಯ ಜಲಾಶಯಕ್ಕೆ 81,000 ಕ್ಯುಸೆಕ್ ಗಿಂತಲೂ ಅಧಿಕ ನೀರು ಹರಿದು ಬರುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಎರಡುವರೆ ಅಡಿ ನೀರು ಅಣೆಕಟ್ಟೆಗೆ ಬಂದಿದೆ.
'ತುಂಗಾ ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ಒಳಹರಿವು ಭಾರಿ ಹೆಚ್ಚಳವಾಗಿದೆ. ಒಳಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇದೇ ರೀತಿ ನೀರು ಹರಿದು ಬಂದರೆ ವಾರದಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗಬಹುದು' ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಅಧಿಕಾರಿಗಳು 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ಹೋದ ವರ್ಷ ಆಗಸ್ಟ್ 8ಕ್ಕೆ ಒಳಹರಿವು ಭಾರಿ ಹೆಚ್ಚಳವಾಗಿ ಆ. 15ರಂದು ಜಲಾಶಯ ಪೂರ್ಣ ತುಂಬಿತ್ತು. ಈ ವರ್ಷವೂ ಅದೇ ಸ್ಥಿತಿ ಸದ್ಯ ಸೃಷ್ಟಿಯಾಗಿದೆ.
ಅಣೆಕಟ್ಟೆಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಕಾರಣ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ರೈತರಲ್ಲಿ ಸಂತಸ ಮನೆ ಮಾಡಿದೆ.