ಹೊಸಪೇಟೆ: ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ನಗರದಲ್ಲಿ ವಿವಿಧ ಸಂಘ ಸಂಸ್ಥೆಗಳು ಮಂಗಳವಾರ ರಾಷ್ಟ್ರೀಯ ಯುವ ದಿನ ಆಚರಿಸಿದವು.
ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ‘ಸ್ವಾಮಿ ವಿವೇಕಾನಂದರ ವಿಚಾರಗಳು ಸರ್ವ ಕಾಲಕ್ಕೂ ಪ್ರಸ್ತುತ. ಇಡೀ ಮನುಕುಲದ ಏಳಿಗೆಗೆ ಎಲ್ಲರೂ ಶ್ರಮಿಸಬೇಕೆಂದು ಕರೆ ಕೊಟ್ಟಿದ್ದರು. ಯುವಜನಾಂಗಕ್ಕೆ ಅವರೊಬ್ಬ ಆದರ್ಶ ಪುರುಷ’ ಎಂದು ನಿವೃತ್ತ ಪ್ರಾಚಾರ್ಯ ಬಿ.ಮಂಜುಳಾ ಹೇಳಿದರು.
ಪ್ರಾಂಶುಪಾಲ ಬಿ.ಜಿ.ಕನಕೇಶಮೂರ್ತಿ, ‘ಭಾರತೀಯ ಸಂಸ್ಕೃತಿಯ ವಿವಿಧತೆಯಲ್ಲಿ ಏಕತೆಯ ಗುಣವನ್ನು ಇಂದಿನ ಯುವಜನತೆ ಅಳವಡಿಸಿಕೊಳ್ಳಬೇಕು’ ಎಂದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಶ್ಯಾಮ ಚೌಧರಿ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಟಿ.ರಘುಪ್ರಸಾದ್, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಟಿ.ಎಚ್.ಬಸವರಾಜ, ಕನ್ನಡ ಸಾಂಸ್ಕೃತಿಕ ವಿಭಾಗದ ಸಂಚಾಲಕ ನಾಗಣ್ಣ ಕಿಲಾರಿ ಇದ್ದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್: ವಿಜಯನಗರ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಪ್ರಭಾರ ಪ್ರಾಚಾರ್ಯ ಪ್ರಭುಗೌಡ ಉದ್ಘಾಟಿಸಿ, ‘ಈ ದೇಶದ ಬೆಳವಣಿಗೆಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯವಂತರಾಗಿ, ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು’ ಎಂದು ಹೇಳಿದರು.
ಸೋಮನಾಥಜೀ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ವಿದ್ಯಾರ್ಥಿ ಪರಿಷತ್ತಿನ ಪರೀಕ್ಷಿತ್ , ಅಭಿಜಿತ್, ರೇಣುಕಪ್ಪ ಚೌಡ್ಕಿ, ಶ್ರೀನಿವಾಸ, ವಿರೇಶ್, ತನುಜಾ, ಸುನೀತಾ, ಮಹಾಲಕ್ಷ್ಮಿ, ಚಿದಾನಂದ್, ಸೋಮನಗೌಡ ಇದ್ದರು.