ಹೊಸಪೇಟೆ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಅವರು ಭಾನುವಾರ ಅತ್ಯಾಚಾರಕ್ಕೊಳಗಾದ ಬಾಲಕಿ ಮನೆಗೆ ಭೇಟಿ ನೀಡಿ, ಪೋಷಕರೊಂದಿಗೆ ಮಾತುಕತೆ ನಡೆಸಿದರು.
‘ಮಕ್ಕಳ ಮೇಲೆ ನಿಗಾ ವಹಿಸುವುದು ಪೋಷಕರಾದವರ ಜವಾಬ್ದಾರಿ. ಇಲ್ಲದಿದ್ದರೆ ಈ ರೀತಿಯ ಘಟನೆಗಳು ಜರುಗುತ್ತವೆ’ ಎಂದು ಪಾಲಕರಿಗೆ ಖಾರವಾಗಿ ಹೇಳಿದರು.
‘ಅತ್ಯಾಚಾರ ನಡೆಸಿರುವ ಆರೋಪಿಯನ್ನು ಬಂಧಿಸುವುದಷ್ಟೇ ಪೊಲೀಸರ ಕೆಲಸವಲ್ಲ. ಸಂತ್ರಸ್ತ ಬಾಲಕಿಗೆ ಸೂಕ್ತ ರಕ್ಷಣೆ ಕೊಡಬೇಕು’ ಎಂದು ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಸೂಚಿಸಿದರು.
ದೇವರಗುಡಿ ಚಂದ್ರಶೇಖರ್ ಎಂಬಾತ ಸತತ ಮೂರು ತಿಂಗಳು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ. ವೈದ್ಯಕೀಯ ಪರೀಕ್ಷೆಯಿಂದ ಬಾಲಕಿ ಗರ್ಭವತಿಯಾದ ವಿಷಯ ಗೊತ್ತಾಗುತ್ತಿದ್ದಂತೆ ಆಕೆಯ ತಾಯಿ ಗ್ರಾಮೀಣ ಠಾಣೆಗೆ ಏ.9ರಂದು ದೂರು ಕೊಟ್ಟಿದ್ದರು. ಪೊಲೀಸರು ಆರೋಪಿಯನ್ನು ಏ. 13ರಂದು ಬಂಧಿಸಿದ್ದರು.