ಬಳ್ಳಾರಿ: 'ಮಹಿಳೆಯ ರಲ್ಲಿ ಸ್ತನ ಮತ್ತು ಗರ್ಭ ಖಂಡದ ಕ್ಯಾನ್ಸರ್ ನ ಗುಣಲಕ್ಷಣಗಳನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆದುಕೊಂಡರೆ ಗುಣಮುಖರಾಗಬಹುದು' ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಅರ್.ನಂದಿನಿ ಹೇಳಿದರು.
ನಗರದ ಬಂಡಿಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ವಿಶ್ವ ಕ್ಯಾನ್ಸರ್ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, 'ಮಹಿಳೆಯರಲ್ಲಿ ಗರ್ಭ ಖಂಡ ಮತ್ತು ಸ್ತನ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು. ಈ ಕ್ಯಾನ್ಸರ್ ಅನ್ನು ಪತ್ತೆ ಹಚ್ಚುವ ಕೆಲಸ ತೀವ್ರಗತಿಯಲ್ಲಿ ನಡೆಯಬೇಕು' ಎಂದರು.
'ಜಿಲ್ಲಾ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ಮ್ಯಾಮೋಗ್ರಫಿ ಘಟಕಕ್ಕೆ ಒಂದೂವರೆ ತಿಂಗಳ ಹಿಂದೆ ಭೇಟಿ ನೀಡಿದ ಸಂದರ್ಭದಲ್ಲಿ ಮಹಿಳಾ ಕೇಂದ್ರಿತವಾಗಿ ಕ್ಯಾನ್ಸರ್ ದಿನಾಚರಣೆಯನ್ನು ಹಮ್ಮಿಕೊಳ್ಳುವ ಆಶಯ ಮೂಡಿತು' ಎಂದರು.
'ದೈಹಿಕವಾಗಿ ಸ್ವಪರಿಶೀಲನೆ ಮಾಡಿಕೊಳ್ಳುವ ಮೂಲಕ, ಆಶಾ ಕಾರ್ಯಕರ್ತೆಯರ ಸಲಹೆ ಪಡೆದು ಸ್ತನ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಬಹುದು. ನಂತರ ವೈದ್ಯರ ಸಲಹೆ ಪಡೆಯಬಹುದು' ಎಂದರು.
' ಪ್ರತಿ ನೂರು ಮಹಿಳೆಯರ ಪೈಕಿ ಕನಿಷ್ಠ ಇಬ್ಬರಲ್ಲೂ ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಇನ್ನೂ ನಿರಾಶಾದಾಯಕ ಪರಿಸ್ಥಿತಿ ಇದೆ. ಕೋವಿಡ್ ಲಾಕ್ ಡೌನ್ ಅವಧಿಯಲ್ಲಿಇ-ಸಂಜೀವಿನಿ ಕಾರ್ಯಕ್ರಮ ದ ಅಡಿ ದೂರವಾಣಿಯಲ್ಲೆ ಅತಿ ಹೆಚ್ಚು ಮಂದಿಗೆ ಆರೋಗ್ಯ ಸಲಹೆ ನೀಡಿದ ಸಾಧನೆ ಯನ್ನು ಜಿಲ್ಲೆ ಮಾಡಿದೆ. ಕ್ಯಾನ್ಸರ್ ತಪಾಸಣೆ ವಿಷಯದಲ್ಲೂ ಈ ಸಾಧನೆ ಆಗಬೇಕಾಗಿದೆ. ಆರು ತಿಂಗಳಲ್ಲಿ ಎಲ್ಲ ಮಹಿಳೆಯರ ಆರೋಗ್ಯ ಸಮೀಕ್ಷೆ ಪೂರ್ಣಗೊಳಿಸಬೇಕು. ತುರ್ತು ಚಿಕಿತ್ಸೆ ಅಗತ್ಯವಿರುವವರನ್ನು ಗುರುತಿಸಿ ಚಿಕಿತ್ಸೆ ಆರಂಭಿಸಬೇಕು' ಎಂದರು.
'ಕ್ಯಾನ್ಸರ್ ಗೆದ್ದು ಬಂದವರ ಕುರಿತ ಅನುಭವ ಕಥನವನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಸಾರ ಮಾಡಬೇಕಾಗಿದೆ. ಆ ಮೂಲಕ ಮಹಿಳೆಯರಲ್ಲಿ ವಿಶ್ವಾಸ ಮೂಡಿಸಬೇಕು' ಎಂದರು.
'ಪುರುಷರಲ್ಲಿ ಕಂಡು ಬರುವ ಮೂತ್ರಕೋಶದ ಕ್ಯಾನ್ಸರ್ ಬಗ್ಗೆಯೂ ಹೆಚ್ಚಿನ ಜಾಗೃತಿ ಮೂಡಬೇಕಾಗಿದೆ. ವೃತ್ತಿ ಸಂಬಂಧಿತವಾದ ಇಂಥ ಕ್ಯಾನ್ಸರ್ ಗಳ ಬಗ್ಗೆ ಜನ ಹೆಚ್ಚು ಮಾತಾಡಬೇಕು' ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ,ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ,ವೈದ್ಯಾಧಿಕಾರಿಗಳಾದ ಡಾ.ಮರಿಯಂ ಬಿ, ಡಾ.ಇಂದ್ರಾಣಿ, ಡಾ.ಅಬ್ದುಲ್ಲಾ, ಡಾ.ಪೂರ್ಣಿಮಾ, ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಇದ್ದರು.