ಬೆಂಗಳೂರು: ನಗರದಲ್ಲಿ ವ್ಯವಸ್ಥಿತವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿರುವ ಕೋರಮಂಗಲ ಪೊಲೀಸರು, ಮೂವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
‘ಕನಕಪುರ ತಾಲ್ಲೂಕಿನ ಕುಪ್ಪದೊಡ್ಡಿಯ ಕೆ. ರವಿಕುಮಾರ್ (25), ಕೊಳ್ಳೇಗಾಲ ಚಿಕ್ಕಲಕೂರಿನ ಮಾರಪ್ಪ ಅಲಿಯಾಸ್ ಕುಳ್ಳ (24) ಹಾಗೂ ಒಡಿಶಾ ಕಟಕ್ ಜಿಲ್ಲೆಯ ರಾಜ ಕಿಶೋರ್ ನಾಯಕ್ (26) ಬಂಧಿತರು. ಅವರಿಂದ 106 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕೋರಮಂಗಲ 8ನೇ ಹಂತದ 2ನೇ ಮುಖ್ಯರಸ್ತೆಯ ಬೇಕರಿಯೊಂದರ ಬಳಿ ಬರುತ್ತಿದ್ದ ಆರೋಪಿಗಳು, ಪರಿಚಯಸ್ಥ ಗ್ರಾಹಕರಿಗೆ ಗಾಂಜಾ ಮಾರಾಟ ಮಾಡಿ ಹೋಗುತ್ತಿದ್ದರು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.
ಬಾಡಿಗೆ ಮನೆಯಲ್ಲಿ ಗಾಂಜಾ: ‘ಕೆಲಸದ ಸ್ಥಳದಲ್ಲಿ ಆರೋಪಿಗಳು ಪರಿಚಯವಾಗಿತ್ತು. ನಂತರ ಗಾಂಜಾ ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸಲು ಮುಂದಾಗಿದ್ದರು’ ಎಂದೂ ಪೊಲೀಸರು ಹೇಳಿದರು.
‘ಆಂಧ್ರಪ್ರದೇಶದಿಂದ ಗಾಂಜಾ ಖರೀದಿಸಿ ನಗರಕ್ಕೆ ತಂದಿದ್ದ ಆರೋಪಿಗಳು, ಬೇಗೂರು ಮೈಲಸಂದ್ರ ಬಳಿಯ ಬಾಡಿಗೆ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದರು. ಮನೆ ಮೇಲೆ ದಾಳಿ ಮಾಡಿ, ಚೀಲದಲ್ಲಿ ಕಟ್ಟಿಟ್ಟಿದ್ದ ಗಾಂಜಾವನ್ನು ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.
‘ಕೆಲ ಕಾಲೇಜು ವಿದ್ಯಾರ್ಥಿಗಳು, ಕೆಲ ಖಾಸಗಿ ಕಂಪನಿ ಉದ್ಯೋಗಿಗಳು ಹಾಗೂ ಕಾರ್ಮಿಕರಿಗೆ ಆರೋಪಿಗಳು ಗಾಂಜಾ ಮಾರುತ್ತಿದ್ದರು. ಈ ಜಾಲದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಅನುಮಾನವಿದೆ’ ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.