ಬೆಂಗಳೂರು: ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಬಿಎಂಟಿಸಿಗೆ 1,300 ವಿದ್ಯುತ್ ಚಾಲಿತ ಬಸ್ಗಳನ್ನು ಸೇರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಲಾಸಿಪಾಳ್ಯದಲ್ಲಿ ಬಿಎಂಟಿಸಿಯ ನೂತನ ಬಸ್ ನಿಲ್ದಾಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ನಿಂದಾಗಿ ಕೆಲವು ವರ್ಷಗಳಿಂದ ಪ್ರಯಾಣ ದರವನ್ನು ಹೆಚ್ಚಿಸಲಾಗಿಲ್ಲ. ಹೀಗಾಗಿ ಸರ್ಕಾರವೇ ಬಿಎಂಟಿಸಿಗೆ ₹2,915 ಕೋಟಿ ನೀಡಿದ್ದು, ನಿರಂತರ ಸೇವೆ ಸಲ್ಲಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಎಂಟಿಸಿಗೆ 3,445 ಬಸ್ಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.
ಬಿಎಂಟಿಸಿಯನ್ನು ಲಾಭದಾಯಕಗೊಳಿಸಲು ಶ್ರೀನಿವಾಸಮೂರ್ತಿಯವರ ಸಮಿತಿ ವರದಿಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಬಿಎಂಟಿಸಿ ನೌಕರರ ಕಲ್ಯಾಣಕ್ಕಾಗಿ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದರು.
ಕೆಎಸ್ಆರ್ಟಿಸಿ, ಖಾಸಗಿ ಬಸ್ ಸೇವೆ ಪಡೆಯುತ್ತಿರುವ ಸುತ್ತಮುತ್ತಲಿನ ಗ್ರಾಮದವರಿಗೆ ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಹೆಚ್ಚು ಅನುಕೂಲಗಳಿವೆ. ಕಲಾಸಿಪಾಳ್ಯ ಬಸ್ ನಿಲ್ದಾಣವನ್ನು ನಮ್ಮ ಮೆಟ್ರೊಗೆ ಸ್ಟೇಷನ್ ಜೋಡಿಸುವ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಚಿವರಾದ ಆರ್.ಅಶೋಕ ಹಾಗೂ ಮುನಿರತ್ನ, ಶಾಸಕ ಉದಯ್ ಗರುಡಾಚಾರ್ ಇದ್ದರು.